– ಬಿಟ್ಟುಹೋದ ವಿದ್ಯಾರ್ಥಿನಿ ಕರೆಸುವಂತೆ ಪೀಡಿಸುತ್ತಿರುವ ಪ್ರೊಫೆಸರ್
ಧಾರವಾಡ: ಆಕಾರವಿಲ್ಲದ ಕಲ್ಲಿಗೆ ಒಬ್ಬ ಶಿಲ್ಪಿ ಹೇಗೆ ಆಕಾರ ನೀಡುತ್ತಾನೋ ಅದೇ ರೀತಿ, ಅಜ್ಞಾನವೆಂಬ ಅಂದಕಾರದಲ್ಲಿರುವ ವ್ಯಕ್ತಿಗೆ ಜ್ಞಾನವೆಂಬ ಮಾರ್ಗ ತೋರುವವನೇ ಶಿಕ್ಷಕ. ಆದ್ರೆ ಗುರುವೇ ದೇವರು ಎಂದು ನಂಬಿರುವ ಸಂಸ್ಕೃತಿ ನಮ್ಮದು. ಆದ್ರೆ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿ-ಶಿಕ್ಷಕರ ನಡುವಿನ ಬಾಂಧವ್ಯಕ್ಕೆ ಬೆಲೆ ಇಲ್ಲದಂತಾಗ್ತಿದೆ. ದೇವರಿಗೆ ಸಮನಾದ ಶಿಕ್ಷಕನೇ ವಿದ್ಯಾರ್ಥಿನಿ ಜೊತೆ ಸೇರಿ ಹೊಲಸು ತಿನ್ನುವ ಕೆಲಸ ಮಾಡಿರುವುದು ಕಂಡುಬರುತ್ತಿದೆ. ಇದಕ್ಕೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ (Dharwad Karnataka University) ನಡೆದಿರುವ ಘಟನೆ ಸಾಕ್ಷಿಯಾಗಿದೆ.
ಹೌದು. ತನ್ನ ವಿದ್ಯಾರ್ಥಿನಿಯ (PHD Student) ಜೊತೆ ಅಕ್ರಮ ಸಂಬಂಧ ಹೊಂದಿದ್ದಲ್ಲದೇ ಆಕೆ ಬಿಟ್ಟು ಹೋದ ನಂತರವೂ ಅವಳನ್ನ ಕರೆಯಿಸುವಂತೆ ಇತರ ವಿದ್ಯಾರ್ಥಿಗಳ ಮೇಲೆ ಒತ್ತಡ ಹಾಕುತ್ತಿದ್ದಾನಂತೆ.

ಈ ಕಾಮುಕ ಪ್ರೊಫೆಸರ್ ಹೆಸರು ದೇವರಾಜ ತಂಗುದೊರೈ ಅಂತ. ಈತ ಸಸ್ಯಶಾಸ್ತ್ರ ವಿಭಾಗದ ಪ್ರೊಫೆಸರ್. ಈತನಿಗೆ ಹುಡುಗಿಯರ ಚಪಲ. ಹೀಗೆ ಈತನ ಬಳಿ ಪಿಹೆಚ್ಡಿ ಮಾಡಲು ಬಂದಿದ್ದ ವಿಜಯಪುರ ಮೂಲದ ವಿದ್ಯಾರ್ಥಿನಿಯೋರ್ವಳನ್ನ ಹೇಗೋ ಪಟಾಯಿಸಿದ್ದಾನೆ. ಆಕೆಯೊಂದಿಗೆ ಕಳೆದ ಕೆಲ ವರ್ಷಗಳಿಂದ ದೈಹಿಕ ಸಂಪರ್ಕವನ್ನೂ ಬೆಳೆಸಿದ್ದಾನೆ. ಈ ವಿಷಯ ಆಕೆಯ ಮನೆಯವರಿಗೆ ಗೊತ್ತಾಗ್ತಿದ್ದಂತೆ ಅರ್ಧಕ್ಕೆ ಪಿಹೆಚ್ಡಿ ನಿಲ್ಲಿಸಿ ಮನೆಗೆ ಕರೆದುಕೊಂಡು ಹೋಗಿದ್ದಾರೆ.
ಇದರಿಂದ ಸೈಕೋ ರೀತಿ ಆಗಿದ್ದ ಪ್ರೊ.ದೇವರಾಜ್, ಅದೇ ವಿಜಯಪುರ ಮೂಲದ ವೇದವ್ಯಾಸ್ ಚೌಹಾಣ್ ಎಂಬುವವರು ಆತನ ಬಳಿ ಪಿಎಚ್ಡಿ ಗೈಡ್ ಪಡೆಯಲು ಹೋಗಿದ್ದರು. ಮೊದಮೊದಲು ವೇದವ್ಯಾಸ್ಗೆ ಗೈಡ್ ಮಾಡಿರುವ ಪ್ರೊ.ದೇವರಾಜ್, ಪಿಹೆಚ್ಡಿ ಮುಗಿಯುವ ಹಂತ ಬಂದಾಗ ತನ್ನನ್ನು ಬಿಟ್ಟು ಹೋದ ಆ ವಿದ್ಯಾರ್ಥಿನಿಯನ್ನ ಮರಳಿ ಕರೆಯಿಸುವಂತೆ ವೇದವ್ಯಾಸ್ಗೆ ಕಿರುಕುಳ ನೀಡಿದ್ದಾನೆ. ಆಕೆಯನ್ನು ಮರಳಿ ಕರೆಸಿದರೆ ಮಾತ್ರ ಪಿಹೆಚ್ಡಿ ಪೂರ್ಣ ಮಾಡಿಕೊಡುತ್ತೇನೆ. ಇಲ್ಲದಿದ್ರೆ ಇಲ್ಲ ಎಂದು ವೇದವ್ಯಾಸ್ಗೆ ಒತ್ತಾಯ ಮಾಡಿದ್ದಾನೆ.

ಇದರಿಂದ ಕಂಗಾಲಾದ ವೇದವ್ಯಾಸ್ ಅವರು ಕುಲಸಚಿವರಿಗೆ ಹಾಗೂ ವಿದ್ಯಾರ್ಥಿ ಸಂಘಟನೆಯವರಿಗೆ ದೂರು ನೀಡಿದ್ದಾರೆ. ಅಲ್ಲದೇ ಆ ವಿದ್ಯಾರ್ಥಿನಿ ಜೊತೆಗೆ ತಾನು ಹೇಗಿದ್ದ ಎಂಬುದರ ಕುರಿತಾಗಿಯೂ ವೇದವ್ಯಾಸ್ಗೆ ಪ್ರೊ.ದೇವರಾಜ ವಿವರಣೆ ನೀಡಿದ್ದಾನೆ. ಆ ಕುರಿತ ಆಡಿಯೋ, ಫೋಟೋಗಳು ಈಗ ಲಭ್ಯವಾಗಿವೆ.
ತನ್ನದೇ ಸಸ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಜೊತೆ ಲವ್ವಿಡವ್ವಿ ಹೊಂದಿದ್ದ ಈ ಪ್ರೊ.ದೇವರಾಜ್, ಆಕೆಯೊಂದಿಗೆ ತೆಗೆಸಿಕೊಂಡಿದ್ದ ಕೆಲ ಫೋಟೋಗಳನ್ನ ತನ್ನ ಇನ್ಸ್ಟಾಗ್ರಾಮ್ನಲ್ಲೂ ಹಾಕಿಕೊಂಡಿದ್ದಾನೆ. ಅಲ್ಲದೇ ಆಕೆಗೆ 3 ಬಾರಿ ಅಬಾಷನ್ ಕೂಡ ಮಾಡಿಸಿದ್ದಾನಂತೆ. ಇಷ್ಟೆಲ್ಲ ಮಾಡಿರುವ ಪ್ರೊಫೆಸರ್ ಮೇಲೆ ಶಿಸ್ತು ಕ್ರಮ ಆಗಬೇಕು. ಆತನನ್ನ ಅಮಾನತು ಮಾಡಿ ಪೊಲೀಸ್ ದೂರು ದಾಖಲಿಸಬೇಕು ಎಂದು ಕವಿವಿ ವಿದ್ಯಾರ್ಥಿ ಸಂಘಟನೆಯವರು ಆಗ್ರಹಿಸಿದ್ದಾರೆ.
ಈ ವಿಚಾರವಾಗಿ ಪ್ರತಿಕ್ರಿಯೆ ಕೇಳಿದ್ರೆ ಪ್ರೊ. ದೇವರಾಜ್, ಅದು ಏನಾದರೂ ಇರಲಿ. ಇದು ಅಕಾಡೆಮಿಕ್ ವಿಷಯ. ಅದರ ಬಗ್ಗೆ ನಾನು ಮಾತನಾಡುವುದಿಲ್ಲ ಎನ್ನುತ್ತಾರೆ.
ಸದ್ಯ ಈ ವಿಚಾರ ಕುಲಪತಿ ಹಾಗೂ ಕುಲಸಚಿವರ ಗಮನಕ್ಕೂ ಇದ್ದು, ಈ ಬಗ್ಗೆ ಕುಲಪತಿಗಳು ಅದ್ಯಾವ ರೀತಿ ಕ್ರಮ ಕೈಗೊಳ್ಳುತ್ತಾರೋ ಕಾದು ನೋಡಬೇಕಿದೆ. ಈ ವಿಷಯವನ್ನ ವಿದ್ಯಾರ್ಥಿ ಸಂಘಟನೆಯವರು ಗಂಭೀರವಾಗಿ ಪರಿಗಣಿಸಿದ್ದು, ಇದು ಹೋರಾಟಕ್ಕೂ ಕಾರಣವಾಗಲಿದೆ.
