ಧಾರವಾಡ: ಜಿಲ್ಲೆಯ ಕುಮಾರೇಶ್ವರ ನಗರದ ಕಟ್ಟಡ ದುರಂತ ನಡೆದು ಇಂದಿಗೆ 38 ದಿನಗಳೇ ಕಳೆದಿವೆ. ಮಾರ್ಚ್ 19ರಂದು ನಡೆದ ಘಟನೆಯಲ್ಲಿ 19 ಜನರು ಸಾವನ್ನಪ್ಪಿದ್ದರೆ, 54 ಜನರು ಜೀವಂತವಾಗಿ ಹೊರ ಬಂದಿದ್ದರು. ಅದರಲ್ಲಿ 40ಕ್ಕೂ ಹೆಚ್ಚು ಜನರು ಗಾಯಗೊಂಡು ಆಸ್ಪತ್ರೆ ಸೇರಿದ್ದರು. ದುರಂತ ಕುರಿತು 25ಕ್ಕೂ ಹೆಚ್ಚು ಜನರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿದ್ದಾರೆ.
ಕೈ ಕಾಲು ಮುರಿದುಕೊಂಡ ಗಾಯಾಳುಗಳು ಚೇತರಿಸಿಕೊಂಡಿಲ್ಲ. ಅವರೆಲ್ಲ ಈಗಲೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗ ಅವರಿಗೆ ಬೇಕಾಗಿದ್ದು ಸರ್ಕಾರದ ಪರಿಹಾರ. ಆ ಪರಿಹಾರಕ್ಕಾಗಿ ಅವರೆಲ್ಲ ಕೈಚಾಚುವಂತೆ ಆಗಿದೆ.
ಇದೇ ಘಟನೆಯಲ್ಲಿ ಅಂಗಡಿ ಮಾಲೀಕರು ಸಾವನ್ನಪ್ಪಿದ್ದರು. ಅವರ ಕುಟುಂಬದವರು ತಮಗೆ ಆದ ನಷ್ಟ ಭರಿಸೊಕೆ ಆಗದೆ ಕಣ್ಣೀರಿಡುವಂತೆ ಆಗಿದೆ. ಕಾರಣ 30 ರಿಂದ 40 ಲಕ್ಷ ಸಾಲ ಮಾಡಿ ಅಂಗಡಿ ತೆರೆದಿದ್ದರು. ಆದರೆ ಜೀವನೂ ಹೋಯಿತು, ಅದರ ಜೊತೆಯಲ್ಲಿ ಅಂಗಡಿನೂ ಹೋಯ್ತು. ಈಗ ಮನೆ ಹಾಗೂ ಮಕ್ಕಳ ಗತಿ ಬೀದಿಗೆ ಬಂದಿವೆ ಎಂದು ಗಾಯಾಳು ಯಲ್ಲಪ್ಪ ಹೇಳುತ್ತಿದ್ದಾರೆ.
ಈಗಾಗಲೇ ಸಾವನ್ನಪ್ಪಿದ ಕುಟುಂಬಗಳಿಗೆ ಸರ್ಕಾರದ ವತಿಯಿಂದ 2 ಲಕ್ಷ ಹಾಗೂ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವತಿಯಿಂದ 2 ಲಕ್ಷ ಪರಿಹಾರ ನೀಡಲಾಗಿದೆ. ಉಳಿದಂತೆ ಹೆಚ್ಚಿನ ಗಾಯಾಳುಗಳಿಗೆ ಸಹ ಪರಿಹಾರ ನೀಡಲಾಗಿದೆ. ಉಳಿದಂತೆ ಚಿಕ್ಕಪುಟ್ಟ ಗಾಯಾಳುಗಳಿಗೆ ಇನ್ನೂ ಪರಿಹಾರ ನೀಡಬೇಕಿದ್ದು, ಸರ್ಕಾರಕ್ಕೆ ಈ ಬಗ್ಗೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದ್ದಾರೆ.
ಘಟನೆಯಲ್ಲಿ ಕೈ,ಕಾಲು ಕಳೆದುಕೊಂಡು ಜಿಲ್ಲಾಧಿಕಾರಿ ಕಚೇರಿವರೆಗೆ ಬಂದಿರುವವರ ಗಾಯವೂ ಚಿಕ್ಕಪುಟ್ಟವಾದುದಲ್ಲ. ಹೀಗಾಗಿ ಪರಿಹಾರ ಏಕೆ ಕೊಟ್ಟಿಲ್ಲ ಎಂಬುದಾಗಿ ಪ್ರಶ್ನೆ ಮಾಡುತ್ತಿದ್ದಾರೆ.