ಧಾರವಾಡ: ವಿಕಲಚೇತನರಿಗೆ ತ್ರಿಚಕ್ರ ವಾಹನ ನೀಡುವ ಸಂದರ್ಶನಕ್ಕೆ ಕರೆದ ಅಧಿಕಾರಿಗಳು, ಸಂರ್ದಶನ ಅರ್ಧಕ್ಕೆ ಮುಗಿಸಿ ಕಚೇರಿಗೆ ಬೀಗ ಹಾಕಿ ಹೊರಟು ಹೋದ ಘಟನೆ ಧಾರವಾಡದಲ್ಲಿ ನಡೆದಿದೆ.
ನಗರದ ಮಿನಿ ವಿಧಾನಸೌಧದಲ್ಲಿರುವ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿಗಳೇ ಈ ಎಡವಟ್ಟು ಮಾಡಿದ್ದಾರೆ. ಜಿಲ್ಲೆಯ ಹಲವು ವಿಕಲಚೇತನರಿಗೆ ಶುಕ್ರವಾರ ತ್ರಿಚಕ್ರ ವಾಹನ ನೀಡುವ ಉದ್ದೇಶದಿಂದ ಸಂದರ್ಶನ ಕರೆಯಲಾಗಿತ್ತು. ಇದಕ್ಕಾಗಿ ಜಿಲ್ಲೆಯ 25 ಕ್ಕೂ ಹೆಚ್ಚು ವಿಕಲಚೇತನರು ಮಿನಿ ವಿಧಾನಸೌಧಕ್ಕೆ ಆಗಮಿಸಿದ್ದರು. ಆದರೆ 12 ಗಂಟೆಗೆ ಕಚೇರಿ ತೆಗೆದ ಅಧಿಕಾರಿಗಳು, ಎಸ್ಸಿ ಎಸ್ಟಿ ಹಾಗೂ ಅಲ್ಪಸಂಖ್ಯಾತರ ಸಂದರ್ಶನ ಮುಗಿಸಿ ಕಚೇರಿಗೆ ಬೀಗ ಹಾಕಿದ್ದಾರೆ.
ಉಳಿದ ವಿಕಲಚೇತನರು ಅಧಿಕಾರಿಗಳಿಗಾಗಿ ಕಾಯುತ್ತ ಕುಳಿತರೂ ಅವರು ಆಗಮಿಸಲೇ ಇಲ್ಲ. ಇದರಿಂದ ಆಕ್ರೋಶಗೊಂಡ ಎಲ್ಲರೂ ಅಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದರು. ನಡೆದಾಡಲು ಬಾರದೆ ಇರುವ ಈ ಎಲ್ಲರೂ ಅಧಿಕಾರಿಗಳು ಬರುವಿಕೆಗೆ ಕಾಯುತ್ತ ಕುಳಿತರೂ ಅಧಿಕಾರಿಗಳು ಮಾತ್ರ ಮತ್ತೇ ಬರಲೇ ಇಲ್ಲ. ಕಳೆದ 4 ಬಾರಿ ಅರ್ಜಿ ಹಾಕಿದ್ದ ಜಿಲ್ಲೆಯ ಶಿರೂರ ಗ್ರಾಮದ ವೀರಭದ್ರಪ್ಪ ಕಮ್ಮಾರ ಎಂಬ ವಿಕಲಚೇತನ ವ್ಯಕ್ತಿ ಈ ಬಾರಿಯಾದ್ರೂ ನನಗೆ ತ್ರಿಚಕ್ರ ವಾಹನ ಸಿಗಬಹುದು ಎಂದು ಆಸೆಯಿಂದಲೇ ಬಂದಿದ್ದರು. ಅಧಿಕಾರಿಗಳ ಬೇಜಾವಾಬ್ದಾರಿಯಿಂದ ವಾಪಸ್ಸಾಗುವ ಮಾತನ್ನ ಹೇಳಿದರು.
ವಿಶ್ವನಾಥ್ ಎಂಬವರು ಸಹ ಇದೇ ರೀತಿ ವಾಹನದ ಆಸೆಯಿಂದ ಬಂದಿದ್ದರು. ಇದಲ್ಲದೇ ಹಲವು ಯುವತಿಯರು ಸಹ ಸಂದರ್ಶನಕ್ಕೆ ಆಗಮಿಸಿದ್ದರು. ಆದರೆ ಅಧಿಕಾರಿಗಳು ಮಾತ್ರ ಅವರಿಗೆ ವಾಹನದ ಸಂದರ್ಶನ ಮಾಡದೇ ಇರುವದು ಅಲ್ಲಿರುವ ಹಲವು ಜನರಿಗೆ ಕೂಡಾ ಬೇಸರ ತರಿಸಿತು.