ಒಂದು ಕಥಾ ಎಳೆಯನ್ನು ಸಿನಿಮಾವಾಗಿ ಕಟ್ಟಿ ನಿಲ್ಲಿಸೋದು ಎಂಥಾ ಕಷ್ಟದ ಸಂಗತಿ ಎಂಬುದು ಗೊತ್ತಿರುವವರಿಗಷ್ಟೇ ಗೊತ್ತಾಗಬಲ್ಲ ವಿಚಾರ. ಅದರಲ್ಲಿಯೂ ಇತಿಹಾಸ, ಪುರಾಣದಂಥಾ ಕಥಾ ವಸ್ತುಗಳಿದ್ದರಂತೂ ಅದೆಷ್ಟು ದಿಕ್ಕಿನಿಂದ ಮಾಹಿತಿ ಕಲೆ ಹಾಕಿದರೂ ಸಾಕಾಗೋದಿಲ್ಲ. ಇಂಥಾದ್ದೊಂದು ಹುಡುಕಾಟ, ರಿಸರ್ಚ್ಗಳ ಫಲವಾಗಿಯೇ ಈ ವಾರ ತೆರೆಗೆ ಬರಲು ರೆಡಿಯಾಗಿರುವ ಚಿತ್ರ ತ್ರಯಂಬಕಂ.
ದಯಾಳ್ ಪದ್ಮನಾಭನ್ ಚಿತ್ರಗಳೆಂದರೇನೇ ಇಂಥಾ ಹುಡುಕಾಟ ಬೇಡುವ ಕಥಾ ಹಂದರ ಹೊಂದಿರುತ್ತವೆ. ಆದರೆ ತ್ರಯಂಬಕಂ ಅದರಲ್ಲಿಯೂ ವಿಶೇಷವಾಗಿರೋ ಕಥೆ ಹೊಂದಿರುವ ಚಿತ್ರ. ಇದರಲ್ಲಿನ ಕಥೆ ಐದು ಸಾವಿರ ವರ್ಷಗಳಷ್ಟು ಹಿಂದಿನ ವಿದ್ಯಮಾನಗಳೊಂದಿಗೂ ಕನೆಕ್ಟ್ ಆಗುತ್ತದೆ. ಆದರೆ ಅಂಥಾ ಪುರಾತನ ರಹಸ್ಯಗಳನ್ನು ಹೆಕ್ಕಿ ತಂದಿದ್ದೇ ಒಂದು ರೋಚಕ ಕಥನ.
ತ್ರಯಂಬಕಂನಲ್ಲಿ ಐದು ಸಾವಿರ ವರ್ಷಗಳ ಹಿಂದಿದ್ದ ನವಪಾಷಾಣ ಔಷಧ ಪದ್ಧತಿಯ ಬಗ್ಗೆ ಪ್ರಧಾನವಾಗಿ ಬೆಳಕು ಚೆಲ್ಲಲಾಗಿದೆ. ಆದರೆ ಅದರ ಬಗ್ಗೆ ಮಾಹಿತಿ ಕಲೆ ಹಾಕೋದು ಅಷ್ಟು ಸಲೀಸಿನ ಸಂಗತಿಯಾಗಿರಲಿಲ್ಲ. ಇದರ ಆಧುನಿಕ ಕುರುಹುಗಳು ಎಲ್ಲಿಯಾದರೂ ಇವೆಯಾ ಎಂಬುದರಿಂದ ಹಿಡಿದು ಪ್ರತಿಯೊಂದಕ್ಕೂ ದಯಾಳ್ ಅವರು ಹುಡುಕಾಡಿದ್ದಾರೆ, ಅಲೆದಾಟ ನಡೆಸಿದ್ದಾರೆ. ಈವತ್ತಿಗೆ ತ್ರಯಂಬಕಂ ಭಾರೀ ಕುತೂಹಲಕ್ಕೆ ಕಾರಣವಾಗಿದೆ ಎಂದರೆ ಅದರ ಹಿಂದೆ ಇಂಥಾ ಶ್ರಮದ ಕಥೆ ಇದೆ. ಹೀಗೆ ಅಗಾಧವಾದ ಶ್ರಮ ಮತ್ತು ಶ್ರದ್ಧೆಯಿಂದ ರೂಪುಗೊಂಡಿರೋ ಈ ಚಿತ್ರ ಈ ವಾರವೇ ಬಿಡುಗಡೆಗೊಳ್ಳಲಿದೆ.