ಮಂಗಳೂರು: ಕುಕ್ಕರ್ ಬಾಂಬ್ ಸ್ಫೋಟಕ್ಕೂ(Mangaluru Blast Case) ಮುನ್ನ ಕರಾವಳಿಯಲ್ಲಿ ಸ್ಯಾಟಲೈಟ್ ಫೋನ್ (Satellite Phone) ರಿಂಗಣಿಸಿದ ವಿಚಾರ ಈಗ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಹೌದು. ನವೆಂಬರ್ 19 ಶನಿವಾರ ಸಂಜೆ ಸ್ಫೋಟ ನಡೆದಿದ್ದರೆ ನ.18ರಂದು ದಕ್ಷಿಣ ಕನ್ನಡದ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆಯಲ್ಲಿ(Kakkinje) ಸ್ಯಾಟಲೈಟ್ ಫೋನ್ ಮೂಲಕ ಕರೆ ಹೋಗಿದೆ.
ಅರಣ್ಯ ಪ್ರದೇಶದಲ್ಲಿ ನಿಷೇಧಿತ ತುರಾಯ (Thuraya) ಕಂಪನಿಯ ಸ್ಯಾಟಲೈಟ್ ಫೋನ್ ಬಳಸಲಾಗಿರುವ ಮಾಹಿತಿ ಈಗ ಸಿಕ್ಕಿದೆ. ಸ್ಯಾಟಲೈಟ್ ಫೋನ್ ಜಾಗವನ್ನು ಬೇಹುಗಾರಿಕಾ ಏಜೆನ್ಸಿಗಳು ಪತ್ತೆ ಮಾಡಿದ್ದು ಪೊಲೀಸರು ಈಗ ಈ ಕೋನದಲ್ಲೂ ತನಿಖೆ ಆರಂಭಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಎರಡು, ಉಡುಪಿ ಒಂದು ಕಡೆ ಮತ್ತು ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಪ್ರದೇಶದಿಂದ ಸ್ಯಾಟಲೈಟ್ ಫೋನ್ ಮೂಲಕ ಕರೆ ಹೋಗಿದೆ. ಸುಮಾರು 5 ವರ್ಷಗಳಿಂದ ಕರಾವಳಿ ಮತ್ತು ಮಲೆನಾಡಿನಲ್ಲಿ ಸ್ಯಾಟಲೈಟ್ ಫೋನ್ ಸದ್ದು ಮಾಡುತ್ತಿವೆ.
ಯುನೈಟೆಡ್ ಅರಬ್ ಎಮಿರೇಟ್ಸ್ ಮೂಲದ ತುರಾಯ ಕಂಪನಿ ಯುರೋಪ್, ಮಧ್ಯಪ್ರಾಚ್ಯ, ಉತ್ತರ, ಮಧ್ಯ ಮತ್ತು ಪೂರ್ವ ಆಫ್ರಿಕಾ, ಏಷ್ಯಾ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಒಟ್ಟು 161 ದೇಶಗಳಿಗೆ ಧ್ವನಿ ಸೇವೆಗಳನ್ನು ನೀಡುತ್ತಿದೆ. ಇದನ್ನೂ ಓದಿ: ರೂಮಿನ ಹತ್ರ ಬಂದಾಗ ಸಡನ್ ಲಾಕ್ – ಕನ್ನಡಕ ಧರಿಸಿ ಓಡಾಟ
ಸ್ಯಾಟಲೈಟ್ ಫೋನ್ ಬಳಕೆಗೆ ನಿಷೇಧ:
ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುತ್ತದೆ ಎಂಬ ಕಾರಣಕ್ಕೆ ಭಾರತದಲ್ಲಿ ಸ್ಯಾಟಲೈಟ್ ಫೋನ್ ಬಳಕೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.
ವೈರ್ಲೆಸ್ ಕಾಯ್ದೆಯ ಸೆಕ್ಷನ್ 6 ಮತ್ತು ಇಂಡಿಯನ್ ಟೆಲಿಗ್ರಾಫ್ ಆಕ್ಟ್ನ ಸೆಕ್ಷನ್ 20ರ ಅಡಿಯಲ್ಲಿ ಭಾರತದಲ್ಲಿ ತುರಾಯ/ಇರಿಡಿಯಮ್ ಸ್ಯಾಟಲೈಟ್ ಫೋನ್ಗಳ ಬಳಕೆಯನ್ನು ಕಾನೂನುಬಾಹಿರ ಎಂದು ಘೋಷಿಸಿದೆ
ಭಾರತಕ್ಕೆ ಪ್ರಯಾಣಿಸುವ ಎಲ್ಲಾ ವ್ಯಕ್ತಿಗಳಿಗೆ ತುರಾಯ/ಇರಿಡಿಯಮ್ ಸ್ಯಾಟಲೈಟ್ ಫೋನ್ಗಳ ಬಳಕೆಯನ್ನು ಭಾರತದಲ್ಲಿ ಅನುಮತಿಸಲಾಗುವುದಿಲ್ಲ ಎಂದು ಸಲಹೆ ನೀಡಲಾಗುತ್ತದೆ. ವಿದೇಶಿಯರು ಭಾರತಕ್ಕೆ ಉಪಗ್ರಹ ಫೋನ್ಗಳನ್ನು ತರುವುದಕ್ಕೂ ನಿಷೇಧ ಹೇರಲಾಗಿದೆ. ಭಾರತಕ್ಕೆ ಬರುವಾಗ ಉಪಗ್ರಹ ಫೋನ್ಗಳಿದ್ದರೆ ಪ್ರಯಾಣಿಕರನ್ನು ಬಂಧಿಸಲಾಗುತ್ತದೆ. ಅಷ್ಟೇ ಅಲ್ಲದೇ ಟೆಲಿಗ್ರಾಫ್ ಕಾಯಿದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ದಂಡ ವಿಧಿಸಲಾಗುತ್ತದೆ.