ದಾವಣಗೆರೆ: ಸ್ಕಾರ್ಪಿಯೋ ವಾಹನದಲ್ಲಿ ಸ್ಫೋಟಕ ವಸ್ತುಗಳನ್ನು ಸಾಗಿಸುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳ ಬಳಿಯಲ್ಲಿದ್ದ ಸ್ಫೋಟಕ ವಸ್ತುಗಳನ್ನು ದಾವಣಗೆರೆಯ ಜಿಲ್ಲೆಯ ಚನ್ನಗಿರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಆಂಧ್ರಪ್ರದೇಶದ ಅನಂತಪುರ ಮೂಲದ ವಿಜಯ್ ಗಣೇಶ (36) ಹಾಗೂ ಬಂಗರಾಜ್ (42) ಬಂಧಿತ ಆರೋಪಿಗಳು. ಚನ್ನಗಿರಿ ಪಟ್ಟಣದ ಚಿತ್ರದುರ್ಗ-ಶಿವಮೊಗ್ಗ ರಾಜ್ಯ ಹೆದ್ದಾರಿಯ ಗರಗ ಕ್ರಾಸ್ನಲ್ಲಿ ಈ ಇಬ್ಬರನ್ನು ಬಂಧಿಸಲಾಗಿದೆ. ಬಂಧಿತರಿಂದ 8800 ಜಿಲೆಟಿನ್ ಕಡ್ಡಿಗಳು, 3700 ಎಲೆಕ್ಟ್ರಾನಿಕ್ ಡಿಟೊನೇಟರ್, ಸ್ಕಾರ್ಪಿಯೋ ಕಾರು ಮತ್ತು 6 ಲಕ್ಷ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ.
ಯಾವ ಕಾರಣಕ್ಕೆ ಸ್ಪೋಟಕ ವಸ್ತುಗಳನ್ನು ಸಾಗಾಟ ಮಾಡುತ್ತಿದ್ದರು ಎನ್ನುವುದು ತನಿಖೆ ನಂತರ ತಿಳಿದು ಬರಬೇಕಿದೆ. ಡಿವೈಎಸ್ಪಿ ಪ್ರಶಾಂತ್ ಮನ್ನೋಳಿ ಮಾರ್ಗದರ್ಶನದಲ್ಲಿ ಸಿಪಿಐ ಆರ್. ಆರ್. ಪಾಟೀಲ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.