ದಾವಣಗೆರೆ: ಬೆಂಗಳೂರಿನಲ್ಲಿ ಒಂದೇ ಕುಟುಂಬದ ಐದು ಜನ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಾಸುವ ಮುನ್ನವೇ ದಾವಣಗೆರೆಯಲ್ಲಿ ಕೂಡ ಒಂದೇ ಕುಟುಂಬದ ಮೂವರು ಜನ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.
ನಗರದ ಭರತ್ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ಏಳು ವರ್ಷದ ಮಗು ಸೇರಿ ಗಂಡ-ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃಷ್ಣ ನಾಯ್ಕ್ (44), ಹೆಂಡತಿ ಸುಮ (32) ಮಗು ಧ್ರುವ (7) ಆತ್ಮಹತ್ಯೆ ಮಾಡಿಕೊಂಡವರು. ಕೃಷ್ಣಾ ನಾಯ್ಕ್ ಲಾರಿ ಚಾಲಕನಾಗಿದ್ದು, ಮೊದಲ ಮಗುವಿಗೆ ವಿಷ ಕುಡಿಸಿ, ನಂತರ ದಂಪತಿ ನೇಣು ಹಾಕಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ತಂದೆ ಶಂಕರ್ ಅನೈತಿಕ ಸಂಬಂಧವೇ ಕುಟುಂಬಕ್ಕೆ ಕುತ್ತಾಯ್ತಾ..? – ಅಪ್ಪನ ಬಗ್ಗೆ ಮೃತ ಮಕ್ಕಳ ಡೆತ್ನೋಟ್
ಮೃತ ಪತ್ನಿ ಸುಮ ಅನಾರೋಗ್ಯಕ್ಕೆ ತುತ್ತಾಗಿದ್ದರು. ಗಂಡ ಕೃಷ್ಣ ನಾಯ್ಕ್ ಸಾಕಷ್ಟು ಆಸ್ಪತ್ರೆಗಳಿಗೆ ಸುಮರನ್ನು ತೋರಿಸಿದರು ಕೂಡ ಯಾವುದೇ ಪ್ರಯೋಜನವಾಗಿಲ್ಲ. ಇದಕ್ಕಾಗಿ ಸಾಕಷ್ಟು ಹಣವನ್ನು ಕೃಷ್ಣ ಖರ್ಚು ಮಾಡಿದ್ದರು ಎಂದು ತಿಳಿದು ಬಂದಿದೆ. ಇದರಿಂದ ಬೇಸತ್ತು, ಮನನೊಂದು ಆತ್ಮಹತ್ಯೆಗೆ ಶರಣಾಗಿರಬಹುದೆಂದು ಹೇಳಲಾಗುತ್ತಿದೆ. ಇದನ್ನೂ ಓದಿ: ನಮ್ಮಪ್ಪ ಕಾಮುಕ, ಸ್ಯಾಡಿಸ್ಟ್, ಕುಡುಕ – ಡೆತ್ನೋಟ್ನಲ್ಲಿ ಮಧುಸಾಗರ್ ಗಂಭೀರ ಆರೋಪ
ಸ್ಥಳದಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು, ಆರ್ಎಂಸಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.