ತುಮಕೂರು: ಅಪ್ಪ ಅಮ್ಮನ ಜಗಳವನ್ನು ಬಿಡಿಸಲು ಹೋದ ಮಗಳಿಗೆ ಅಪ್ಪನಿಂದಲೇ ಮಚ್ಚಿನೇಟು ಬಿದ್ದಿರುವ ಘಟನೆ ಜಿಲ್ಲೆಯ ಗುಬ್ಬಿ ತಾಲೂಕಿನ ಪಿನ್ನೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
12 ವರ್ಷದ ಬೃಂದಾ ತೀವ್ರವಾಗಿ ಗಾಯಗೊಂಡಿರುವ ಮಗಳು. ಅಪ್ಪ ಅಮ್ಮನ ಜಗಳ ಬಿಡಿಸಲು ಹೋದಾಗ ಬೃಂದಾ ತಲೆಗೆ ಏಟು ಬಿದ್ದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಬಾಲಕಿಯನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದಾರೆ.
ಗ್ರಾಮದ ನಿವಾಸಿ ನಾಗರಾಜ್ ಹಾಗೂ ಪತ್ನಿ ಶಾಂತಮ್ಮ ಮಧ್ಯೆ ಕ್ಷುಲ್ಲಕ ವಿಚಾರಕ್ಕೆ ಜಗಳ ಆರಂಭವಾಗಿದೆ. ಹೆಂಡತಿಯ ವರ್ತನೆಯಿಂದ ತೀವ್ರ ಆಕ್ರೋಶಗೂಂಡ ನಾಗರಾಜ್ ಅಲ್ಲೇ ಪಕ್ಕದಲ್ಲಿದ್ದ ಮಚ್ಚಿನಿಂದ ಹೊಡೆಯಲು ಮುಂದಾಗಿದ್ದಾನೆ. ಈ ಸಂದರ್ಭದಲ್ಲಿ ಹತ್ತಿರವಿದ್ದ ಬೃಂದಾ ಅಡ್ಡ ಬಂದಿದ್ದಾಳೆ. ಪತ್ನಿಗೆ ಬೀಸಿದ ಮಚ್ಚು ನೇರವಾಗಿ ಮಗಳ ತಲೆಗೆ ಬಂದು ಬಿದ್ದಿದ್ದೆ. ಪರಿಣಾಮ ಬೃಂದಾ ಗಂಭೀರವಾಗಿ ಗಾಯಗೂಂಡಿದ್ದಾಳೆ.
ಕೂಡಲೇ ಅಕ್ಕ ಪಕ್ಕದ ಮನೆಯವರು ಬಂದು ಬಾಲಕಿಯನ್ನ ಸಮೀಪದ ಚೇಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿದ್ದು, ನಂತರ ಬೆಂಗಳೂರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಆರೋಪಿ ತಂದೆ ನಾಗರಾಜ್ನನ್ನು ಚೇಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.