ಬೆಂಗಳೂರು: ಐತಿಹಾಸಿಕ ಗಂಡುಗಲಿ ಮದಕರಿ ನಾಯಕ ಚಿತ್ರದ ಮುಹೂರ್ತಕ್ಕೆ ಇಂದು ಚಾಲನೆ ಸಿಕ್ಕಿದ್ದು, ಮದಕರಿ ನಾಯಕನ ಪಾತ್ರದಿಂದ ಚಿತ್ರ ಜನರಿಗೆ ಇನ್ನಷ್ಟು ಹತ್ತಿರವಾಗಲಿದೆ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ನಟ ದರ್ಶನ್, ಇಂದು ಸುಮಲತಾ ಅಮ್ಮ ಚಿತ್ರದ ಮುಹೂರ್ತಕ್ಕೆ ಚಾಲನೆ ಕೊಟ್ಟಿದ್ದಾರೆ. ಚಿತ್ರದಲ್ಲಿ ಎಲ್ಲರೂ ಹಿರಿಯ ಕಲಾವಿದರಿದ್ದಾರೆ. ಅವರು ದರ್ಶನ್ ಕೂತ್ಕೊ ಅಂದರೆ ಕುತ್ಕೋಬೇಕು, ನಿಂತ್ಕೊ ಅಂದರೆ ನಿಂತ್ಕೋಬೇಕು. ಯಾಕೆಂದರೆ ಎಲ್ಲರೂ ನನ್ನ ಸಿನಿಯರ್ಸ್ ಎಂದು ಹೇಳಿದರು. ಇದನ್ನೂ ಓದಿ: ಗಂಡುಗಲಿ ಮದಕರಿ ನಾಯಕ ಸಿನಿಮಾ ಮೂಹೂರ್ತದಲ್ಲಿ ಸುಮಲತಾ ಭಾಗಿ
ಚಿತ್ರದಲ್ಲಿರುವ ಬಹಳ ಕಲಾವಿದರು ನಮ್ಮ ತಂದೆ ಜೊತೆಗೆ ಕೆಲಸ ಮಾಡಿದ್ದಾರೆ. ಗಂಡುಗಲಿ ಮದಕರಿ ನಾಯಕನ ಚಿತ್ರಕ್ಕಾಗಿ ದೊಡ್ಡ ಟೀಮ್ ಸೇರಿದ್ದೀವಿ. ಮದಕರಿ ನಾಯಕನ ಪಾತ್ರದಿಂದ ಚಿತ್ರ ಇನ್ನಷ್ಟು ಜನರಿಗೆ ಹತ್ತಿರವಾಗಲಿದೆ. ಅಲ್ಲದೆ ರಾಜಮಾತೆ ಪಾತ್ರದಲ್ಲಿ ಸುಮಲತಾ ಅವರು ಕಾಣಿಸಿಕೊಳ್ಳಲಿದ್ದಾರೆ. ಈಗ ಆರಂಭವಾಗಿದೆ, ತಯಾರಿಗಳು ನಡೆಯುತ್ತಿದೆ ಎಂದು ದರ್ಶನ್ ತಿಳಿಸಿದರು. ಇದನ್ನೂ ಓದಿ: ದುರ್ಗದ ಕೋಟೆಯಲ್ಲಿ ‘ವೀರ ಮದಕರಿ ನಾಯಕ’ನಾಗಿ ಸಾರಥಿಯ ಪಯಣ
ದರ್ಶನ್ ಅಭಿನಯದ ಐತಿಹಾಸಿಕ ಗಂಡುಗಲಿ ಮದಕರಿ ನಾಯಕ ಚಿತ್ರದ ಮಹೂರ್ತ ಇಂದು ನೆರವೇರಿದೆ. ಪುರಾತನ ಗವಿ ಗಂಗಾಧರೆಶ್ವರ ದೇವಸ್ಥಾನದಲ್ಲಿ ಮಹೂರ್ತ ನಡೆದಿದ್ದು, ಚಿತ್ರದ ಮೊದಲ ಸೀನ್ ಗೆ ಚಾಲನೆ ನೀಡಲಾಗಿದೆ. ಮಹೂರ್ತ ಕಾರ್ಯಕ್ರಮದಲ್ಲಿ ದರ್ಶನ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಶ್ರೀನಿವಾಸ್ ಮೂರ್ತಿ ಭಾಗಿಯಾಗಿದ್ದಾರೆ.
ದರ್ಶನ್ ಅವರು ಕ್ರಾಂತಿವೀರ ಸಂಗೊಳ್ಳಿರಾಯಣ್ಣ, ಕುರುಕ್ಷೇತ್ರ ಚಿತ್ರಗಳ ನಂತ ಇದೀಗ ಮತ್ತೊಂದು ಐತಿಹಾಸಿಕ ಚಿತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಬಿ.ಎಲ್.ವೇಣು ಕಾದಂಬರಿಯನ್ನು ಆಧರಿಸಿದ ಸಿನಿಮಾ ಇದಾಗಿದ್ದು, ಬಿಗ್ ಬಜೆಟ್ ಚಿತ್ರವಾಗಿದೆ. ತಾರಾಗಣ, ತಂತ್ರಜ್ಞರ ತಂಡ ಕೂಡ ತುಂಬಾ ವಿಶಾಲವಾಗಿರಲಿದೆ. ಬೆಂಗಳೂರು, ರಾಜಸ್ಥಾನ, ಚಿತ್ರದುರ್ಗ, ಮುಂಬೈನಲ್ಲೂ ಕೂಡ ಶೂಟಿಂಗ್ ನಡೆಯಲಿದೆ ಎಂಬುದಾಗಿ ತಿಳಿದುಬಂದಿದೆ.