ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್ (Ashwini Puneeth Rajkumar) ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದವರ ವಿರುದ್ಧ ದರ್ಶನ್ (Darshan) ಅಭಿಮಾನಿಗಳು ಕೂಡ ದೂರು ನೀಡಿದ್ದಾರೆ. ಬಸವೇಶ್ವರ ನಗರ ಪೊಲೀಸ್ ಠಾಣೆಗೆ ಬಂದಿದ್ದ ಅಭಿಮಾನಿಗಳು ಗಜಪಡೆ ಹೆಸರಿನ ಸೋಷಿಯಲ್ ಮೀಡಿಯಾ ಖಾತೆಯಿಂದ ಅವಮಾನಿಸುವಂತಹ ಕೆಲಸವಾಗಿದೆ. ಕೂಡಲೇ ಕ್ರಮ ತೆಗೆದುಕೊಳ್ಳಿ ಎಂದು ದೂರಿನಲ್ಲಿ (Complainant) ಉಲ್ಲೇಖಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅಭಿಮಾನಿ ನಾಗರಾಜ್, ‘ಅಶ್ವಿನಿ ಅವರಿಗೆ ನ್ಯಾಯ ಸಿಗ್ಬೇಕು ಅಂತ ನಮ್ಮ ಸಂಘದ ವತಿಯಿಂದ ದೂರು ದಾಖಲಿಸಿದ್ದೇವೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ದರ್ಶನ್, ಅಪ್ಪು ಹೆಸರಿನಲ್ಲಿ ಅವರು ಮೈಲೇಜ್ ತಗೋತಿದ್ದಾರೆ. ಯಾರು ಅಂತ ಗೊತ್ತಾಗಬೇಕು. ಲೈಕ್, ಕಾಮೆಂಟ್ ಗೆ ರಾಜ್ಯ ಹೊತ್ತಿ ಉರಿಯೋ ಕೆಲಸ ಮಾಡ್ತಿದ್ದಾರೆ. ಕಾನೂನು ರೀತಿ ಹೋರಾಟ ಮಾಡಿ ರೌಡಿಸಂ ಬೇಡ ಎಂದಿದ್ದಾರೆ.
ಮುಂದುವರೆದು ಮಾತನಾಡಿದ ಅವರು, ದರ್ಶನ್ ಪತ್ನಿ ವಿಜಯಲಕ್ಷ್ಮಿ, ನಟಿ-ಸಂಸದೆ ಸುಮಲತಾ, ನಿರ್ಮಾಪಕಿ ಅಶ್ವಿನಿ ಪುನೀತ್, ದರ್ಶನ್ ತಾಯಿ ಮೀನಾ ತೂಗುದೀಪ್ ಹೀಗೆ ಈ ಎಲ್ಲರ ಬಗ್ಗೆನೂ ಕೆಟ್ಟದ್ದಾಗಿ ಪೋಸ್ಟ್ ಮಾಡಲಾಗಿದೆ. ಇದು ತಪ್ಪು. ಈ ಹೆಣ್ಣುಮಕ್ಕಳಿಗೆ ನ್ಯಾಯ ಸಿಗಬೇಕು ಅಂತ ಕಂಪ್ಲೇಂಟ್ ಫೈಲ್ ಮಾಡಿದೀವಿ ಎನ್ನುತ್ತಾರೆ.
ಅಶ್ವಿನಿ ಪುನೀತ್ ರಾಜ್ಕುಮಾರ್ ಅವರ ವಿಚಾರದಲ್ಲಿ ದರ್ಶನ್ ಅವರೂ ನೊಂದುಕೊಂಡಿದ್ದಾರೆ. ಅವರಿಗೂ ಈ ವಿಚಾರ ಗಮನಕ್ಕಿದೆ. ದರ್ಶನ್ ಅವರು ಸಿನಿಮಾ ಬಗ್ಗೆ ಪ್ರಚಾರ ಮಾಡಿ ಅಂತಾರೆ. ಯಾವುದೇ ಚಿತ್ರನಟ ಸ್ಟಾರ್ ವಾರ್ ಮಾಡಿ ಅನ್ನೋದಿಲ್ಲ ಎನ್ನುವುದು ಅಭಿಮಾನಿಗಳ ಮಾತು.