ಹುಬ್ಬಳ್ಳಿ: ಕಾಂಗ್ರೆಸ್ನವರು ಮೇಕೆದಾಟು ಯೋಜನೆ ಬಿಟ್ಟು ಮೇಕೆ ತಿನ್ನುವುದರಲ್ಲಿ ಮಗ್ನರಾಗಿದ್ದರು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ವ್ಯಂಗ್ಯವಾಡಿದರು.
ಕಾಂಗ್ರೆಸ್ ನಿಂದ ಮೇಕೆದಾಟು ಪಾದಯಾತ್ರೆ ವಿಚಾರವಾಗಿ ಹುಬ್ಬಳ್ಳಿಯ ಬಿಜೆಪಿ ಕಾರ್ಯಕಾರಣಿಯಲ್ಲಿ ಮಾತನಾಡಿದ ಅವರು, ಕೈ ಪಕ್ಷವು ಅಧಿಕಾರದಲ್ಲಿದ್ದಾಗ ಏನೂ ಮಾಡಲಿಲ್ಲ. ಈಗ ಮೇಕೆದಾಟು ಯೋಜನೆ ಬಿಟ್ಟು ಮೇಕೆ ತಿನ್ನುವುದರಲ್ಲಿ ಮಗ್ನರಾಗಿದ್ದಾರೆ. ಬಿಜೆಪಿ ಸರ್ಕಾರಕ್ಕೆ ಬದ್ಧತೆ ಇದೆ. ಅದಕ್ಕೆ ಸಂಬಂಧಿಸಿದಂತೆ ಡಿಪಿಆರ್ ನಡೀತಾ ಇದೆ ಎಂದರು. ಇದನ್ನೂ ಓದಿ: ಮಾಜಿ ಸಿಎಂ ಎಚ್ಡಿಕೆ ಒಳ್ಳೆಯ ನಾಯಕ ಹಾಗೂ ಸಾಹಿತಿ: ಡಿಕೆಶಿ ವ್ಯಂಗ್ಯ
ಮೋದಿ ಹಠಾವೋ ಅನ್ನೋ ಸಿದ್ದರಾಮಯ್ಯ ಹೇಳಿಕೆಯ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯನವರು ಏನೇನು ಹೇಳುತ್ತಾರೆಯೋ ಅದಕ್ಕೆ ಉಲ್ಟಾ ಆಗಿ ನಡೆಯುತ್ತದೆ. ಅಪ್ಪನ ಆಣೆ ಮೋದಿ ಪ್ರಧಾನಿ ಆಗಲ್ಲ ಅಂದರು. ಎರಡು ಬಾರಿ ಮೋದಿ ಪ್ರಧಾನಿ ಆದರು. ಹಠಾವೋ ಹಠಾವೋ ಅಂತಾ ಇರೋದು ಅವರನ್ನ ಕಾಂಗ್ರೆಸ್ ನಿಂದ ಹಠಾವೋ ಮಾಡಬಾರದು ಅಂತಾ. ಸಿದ್ದರಾಮಯ್ಯನವರ ಮನೆಯಲ್ಲೇ ಅವರ ಮಾತು ಕೇಳಲ್ಲ. ಅವರ ಮನೆಯಲ್ಲೇ ಮೋದಿ ಮೋದಿ ಅಂತಾರೆ ಎಂದು ಹೇಳಿದರು.
ಇದೇ ವೇಳೆ ಮಾಲೇಗಾಂವ್ ಸ್ಫೋಟ ಪ್ರಕರಣ ವಿಚಾರದಲ್ಲಿ ಕಾಂಗ್ರೆಸ್ ಯೋಗಿ ಆದಿತ್ಯನಾಥ್ ಹೆಸರು ಪ್ರಸ್ತಾಪವಾಗಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಷಡ್ಯಂತ್ರ ರಚಿಸಿ ಆತಂಕವಾದಿಗಳ ಜೊತೆ ಸಮೀಕರಿಸಿ ರಾಷ್ಟ್ರದ್ರೋಹ ಮಾಡುತ್ತಿದ್ದು, ಅವರು ಕ್ಷಮೆ ಕೇಳಬೇಕು. ಹಿಂದುತ್ವವಾದಿಗಳನ್ನ ಆತಂಕವಾದಿಗಳು ಎಂದು ಬಿಂಬಿಸುತ್ತಿದ್ದಾರೆ. ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿಯ ತಪ್ಪು ನಿರ್ಣಯಗಳಿಂದ 44 ಸ್ಥಾನಳಿಗೆ ಬಂದು ನಿಂತಿದ್ದಾರೆ. ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಚುನಾವಣೆಗೆ ಹೋದರೆ ಸಿಂಗಲ್ ಡಿಜಿಟ್ ಕೂಡಾ ಬರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರ ಬಂದರೆ ಮತಾಂತರ ಕಾಯ್ದೆ ರದ್ದು ಮಾಡುತ್ತೇನೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿ, ಅವರು ಅಧಿಕಾರಕ್ಕೆ ಬರಲ್ಲ. ಅವರದ್ದು ಒಂದು ತಿರುಕನ ಕನಸು. ಕಪಾಲಿ ಬೆಟ್ಟದ ಮೇಲೆ ಮೂರ್ತಿ ಸ್ಥಾಪನೆ ಮಾಡಲು ಹೋಗಿ ಅಧಿಕಾರ ಗಿಟ್ಟಿಸಿಕೊಂಡರು. ಸರ್ಕಾರದಲ್ಲಿ ಪದವಿ ಗಿಟ್ಟಿಸಿಕೊಳ್ಳಲು ಲಿಯೋ ಪಾಸ್ಟರ್ ರೀತಿ ಮಾತನಾಡಬೇಕಾಗುತ್ತದೆ ಕಾರ್ಯಕಾರಣಿಯಲ್ಲಿ ವಿಷಯಾಧಾರಿತ ಚರ್ಚೆ ನಡೆದಿದೆ. ಮತ್ತೆ ನಮ್ಮ ಪಕ್ಷವೇ ಅಧಿಕಾರಕ್ಕೆ ಬರುತ್ತದೆ. ಕಾಂಗ್ರೆಸ್ ತಿರುಕನ ಕನಸು ಕಾಣುತ್ತಿದೆ. ಖಾಲಿ ಇಲ್ಲದಿರುವ ಕುರ್ಚಿಗೆ ಟವಲ್ ಹಾಕುತ್ತಿದ್ದಾರೆ ಎಂದರು. ಇದನ್ನೂ ಓದಿ: ಎರಡ್ಮೂರು ಬಾರಿ ಸಚಿವರಾದವರು ಈಗ ಸ್ಥಾನ ಬಿಟ್ಟುಕೊಡಲಿ: ರೇಣುಕಾಚಾರ್ಯ ಆಗ್ರಹ
ನಮ್ಮ ಸರ್ಕಾರ ಎಲ್ಲ ಧರ್ಮಗಳ ಹಿತಾಸಕ್ತಿ ಕಾಯುತ್ತದೆ. ಸಿದ್ದರಾಮಯ್ಯನವರ ಉದ್ದೇಶ ಅಂಬೇಡ್ಕರ್ರವರನ್ನು ಮರೆತು ಕ್ರಿಸ್ತನ ಕೈ ಹಿಡಿಯಬೇಕು ಎಂಬುದು ಅವರ ಉದ್ದೇಶ. ಬುದ್ದ-ಬಸವ-ಕನಸದಾಸರನ್ನ ಮರೆತು ಕ್ರಿಸ್ತನ ಹಿಡಿದುಕೊಳ್ಳಬೇಕು ಅನ್ನೋದು ಅವರ ಉದ್ದೇಶವಾಗಿದೆ.
ಡಿಸೆಂಬರ್ 30 ಕರ್ನಾಟಕ ಬಂದ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದ ಹಿತಾಸಕ್ತಿ ಉಳಿಸಿಕೊಳ್ಳಲು ಸರ್ಕಾರ ನಡೆಯುತ್ತದೆ. ನಮ್ಮಲ್ಲಿ ಭಾಷಾ ಸಂಘರ್ಷ ಇಲ್ಲ. ನಾವು ಸಾಮರಸ್ಯ ಉಳಿಸಿಕೊಳ್ಳಲು ಬದ್ಧರಾಗಿದ್ದೇವೆ. ಸಂಘರ್ಷದ ಅವಶ್ಯಕತೆ ಇಲ್ಲ. ಮಹಾರಾಷ್ಟ್ರದವರು ಸಹ ನಮ್ಮ ಸಹೋದರರು ಎಂದು ಹೇಳಿದರು.