ಜೈಪುರ: 1 ವರ್ಷದ ಮಗುವಾಗಿದ್ದಾಗ ನಡೆದ ಮದುವೆ ರದ್ದಾಗಿದ್ದು 21 ವರ್ಷದ ಯುವತಿಗೆ ಹುಟ್ಟುಹಬ್ಬದ ದಿನವೇ ನ್ಯಾಯಾಲಯದಿಂದ(Court) ನ್ಯಾಯ ಸಿಕ್ಕಿದೆ.
ಜೋಧಪುರದ(Jodhpur) ಹಳ್ಳಿಯೊಂದರ ನಿವಾಸಿ ರೇಖಾಗೆ 1 ವರ್ಷವಾಗಿದ್ದಾಗ ಆಕೆಯ ಕುಟುಂಬಸ್ಥರು ಮದುವೆ ಮಾಡಿಸಿದ್ದರು. ಇತ್ತೀಚೆಗೆ ಆಕೆಯ ಅತ್ತೆಯ ಕುಟುಂಬವು ಗೌನಾ(ಹುಡುಗನ ಮನೆಗೆ ಬರುವ ಸಂಪ್ರದಾಯ) ಆಚರಣೆಗೆ ಬರುವಂತೆ ಒತ್ತಡವನ್ನು ಹೇರಿದ್ದರು. ಈ ಹಿನ್ನೆಲೆಯಲ್ಲಿ ಕೋರ್ಟ್ ಮೆಟ್ಟಿಲೇರಿದ್ದ ರೇಖಾಳಿಗೆ ಈಗ ನ್ಯಾಯ ದೊರೆತಿದೆ.
ಏನಿದು ಪ್ರಕರಣ?: ರೇಖಾಳ ಅಜ್ಜ 2002ರಲ್ಲಿ ನಿಧನ ಹೊಂದಿದ್ದರು. ಆಗಿನ್ನು ರೇಖಾಳಿಗೆ ಕೇವಲ ಒಂದು ವರ್ಷ ವಯಸ್ಸಾಗಿತ್ತು. ಅದೇ ಸಂದರ್ಭದಲ್ಲಿ ರೇಖಾಳನ್ನು ಅದೇ ಗ್ರಾಮದ ಹುಡುಗನ ಜೊತೆ ಮದುವೆ ಮಾಡಿಸಿದ್ದರು. ಇದಾದ ನಂತರ ಆಕೆಯನ್ನು ಅತ್ತೆಮನೆಗೆ ಕಳಿಸಿರಲಿಲ್ಲ. ಬದಲಾಗಿ ಯಾವುದೇ ತೊಂದರೆಯಿಲ್ಲದೇ ತನ್ನ ಮನೆಯಲ್ಲೇ ಆಟವಾಡಿಕೊಂಡು ಚೆನ್ನಾಗಿ ಓದಿಕೊಂಡಿದ್ದಳು. ಅಷ್ಟೇ ಅಲ್ಲದೇ ಆಕೆಯ ಅತ್ತೆ ಮನೆಯಿಂದ ಯಾವುದೇ ತೊಂದರೆಯೂ ಆಗಿರಲಿಲ್ಲ.
ಆಕೆಗೆ 18 ವರ್ಷ ತುಂಬಿದಾಗ ಆಕೆಯ ಅತ್ತೆಯ ಮನೆಯವರು ಧಾರ್ಮಿಕ ವಿಧಿ ವಿಧಾನದಂತೆ ಮನೆ ತುಂಬಿಸಿಕೊಳ್ಳಬೇಕು ಒಂದು ಒತ್ತಾಯಿಸಿದ್ದಾರೆ. ಇದರಿಂದಾಗಿ ರೇಖಾಗೆ ತಾನು ಚೆನ್ನಾಗಿ ಓದಿ ಏನಾದರೂ ಸಾಧನೆ ಮಾಡಬೇಕು ಎಂಬ ಕನಸಿಗೆ ಧಕ್ಕೆ ಉಂಟಾಯಿತು. ಇದರಿಂದಾಗಿ ಆಕೆ ಹುಡುಗನ ಮನೆಗೆ ಹೋಗಲು ನಿರಾಕರಿಸಿದ್ದಳು. ಅಷ್ಟೇ ಅಲ್ಲದೇ ತನಗೆ ಒಂದು ವರ್ಷ ಇದ್ದಾಗ ಮದುವೆ ಆಗಿತ್ತು. ಇದರಿಂದಾಗಿ ಈ ಮದುವೆಯನ್ನು ನಾನು ಒಪ್ಪುವುದಿಲ್ಲ ಎಂದು ಪಟ್ಟು ಹಿಡಿದಿದ್ದಳು.
ಮದುವೆ ವಿರೋಧಿಸಿದ್ದಕ್ಕೆ ಹುಡುಗನ ಮನೆಯವರು ಜಾತಿ ಪಂಚಾಯಿತಿಯನ್ನು ಕರೆದರು. ಅಷ್ಟೇ ಅಲ್ಲದೇ ಮದುವೆಯನ್ನು ನಿರಾಕರಿಸಿದ್ದಕ್ಕೆ 10 ಲಕ್ಷ ರೂ. ದಂಡವನ್ನು ಹಾಕಿ ಆಕೆಯ ಕುಟುಂಬಕ್ಕೆ ಬೆದರಿಕೆಯನ್ನು ಒಡ್ಡಲಾಗಿತ್ತು. ಇದನ್ನೂ ಓದಿ: ಕ್ಯಾಮೆರಾವನ್ನು ಲೆಕ್ಕಿಸದೇ ಕಿತ್ತಾಡಿದ ಮಹಿಳಾ ಆಯೋಗದ ಅಧ್ಯಕ್ಷೆ – ಪೊಲೀಸ್ ಅಧಿಕಾರಿ
ಈ ಘಟನೆಯ ಬಳಿಕ ರೇಖಾ ಸಹಾಯಕ್ಕಾಗಿ ಮ್ಯಾನೇಜಿಂಗ್ ಟ್ರಸ್ಟಿಯನ್ನು ಸಂಪರ್ಕಿಸಿದ್ದಾಳೆ. ಆಗ ಟ್ರಸ್ಟ್ನವರು ಬಾಲ್ಯವಿವಾಹವನ್ನು(Child Marriage) ರದ್ದುಗೊಳಿಸುವಂತೆ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅಲ್ಲಿ ಕೌಟುಂಬಿಕ ನ್ಯಾಯಾಲಯದ ಜಡ್ಜ್ ಪ್ರದೀಪ್ ಕುಮಾರ್ ಮೋದಿ ಅವರು ಮದುವೆಯನ್ನು ರದ್ದುಗೊಳಿಸಿ ತೀರ್ಪು ಪ್ರಕಟಿಸಿದರು. ಇದನ್ನೂ ಓದಿ: ನನಗೆ ಜ್ವರ ಇತ್ತು: ತೆಪ್ಪದಲ್ಲಿ ಪ್ರವಾಹ ವೀಕ್ಷಣೆಗೆ ಮಹೇಶ್ ಸ್ಪಷ್ಟನೆ