ಮಂಡ್ಯ: ಬೀಗ ಹಾಕಿದ್ದ ಮನೆಯೊಂದರ ಒಳಗೆ ಕೊಳೆತ ಸ್ಥಿತಿಯಲ್ಲಿ ದಂಪತಿಯ ಶವ ಪತ್ತೆಯಾಗಿರುವ ಘಟನೆ ಮಂಡ್ಯದ ಕೆಆರ್ ಪೇಟೆ ತಾಲೂಕಿನ, ರಾಯಸಮುದ್ರ ಗ್ರಾಮದಲ್ಲಿ ನಡೆದಿದೆ.
ರಾಯಸಮುದ್ರ ಗ್ರಾಮದ ನಿವಾಸಿಗಳಾದ ಗುಂಡ(45), ಲಲಿತಮ್ಮ(40) ಮೃತ ದುರ್ದೈವಿಗಳು. ದಂಪತಿಯನ್ನ ದುಷ್ಕರ್ಮಿಗಳು ಕೊಲೆ ಮಾಡಿ ಮನೆಯೊಳಗೆಯೇ ಶವವನ್ನು ಬಿಟ್ಟು ಹೊರಗಿನಿಂದ ಬೀಗ ಹಾಕಿ ಎಸ್ಕೇಪ್ ಆಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಕೊಲೆಗೆ ಕಾರಣವಾಗಲಿ, ಕೊಲೆಗಾರರ ಬಗ್ಗೆ ಮಾಹಿತಿಯಾಗಲಿ ಇನ್ನೂ ತಿಳಿದು ಬಂದಿಲ್ಲ.
ಸುಮಾರು ನಾಲ್ಕೈದು ದಿನದಿಂದ ಮನೆ ಬಾಗಿಲು ತೆಗೆದಿರಲಿಲ್ಲ. ಮನೆಗೆ ಹೊರಗಿನಿಂದ ಬೀಗ ಹಾಕಲಾಗಿತ್ತು. ಇದನ್ನು ನೋಡಿ ಅಕ್ಕ-ಪಕ್ಕದ ಮನೆಯವರು ಮನೆಯಲ್ಲಿ ಯಾರೂ ಇಲ್ಲವೇನೋ ಅಂದುಕೊಂಡಿದ್ದರು. ಆದರೆ ಮನೆಯಿಂದ ವಾಸನೆ ಬಂದಿದ್ದರಿಂದ ಅನುಮಾನಗೊಂಡ ಗ್ರಾಮಸ್ಥರು ಮನೆಯ ಬೀಗ ಒಡೆದು ನೋಡಿದಾಗ ಕೊಳೆತ ಸ್ಥಿತಿಯಲ್ಲಿ ಜೋಡಿ ಶವ ಪತ್ತೆಯಾಗಿದೆ. ಇದನ್ನು ಕಂಡು ಆತಂಕಗೊಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.
ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಕೆಆರ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.