ದಾವಣಗೆರೆ/ಬಾಗಲಕೋಟೆ: ಪಂಚರಾಜ್ಯ ಚುನಾವಣೆ ಜೊತೆಗೆ ಕರ್ನಾಟಕದ ಬಾಗಲಕೋಟೆ, ದಾವಣಗೆರೆ ದಕ್ಷಿಣ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆದಿತ್ತು. ಅವುಗಳ ಫಲಿತಾಂಶವೂ ಇಂದೇ ಪ್ರಕಟವಾಗಲಿದೆ. ಬಾಗಲಕೋಟೆಯಲ್ಲಿ (Bagalkote) ಹೆಚ್ವೈ ಮೇಟಿ ಅವರ ಅಕಾಲಿಕ ನಿಧನ ಹಾಗೂ ದಾವಣಗೆರೆಯಲ್ಲಿ (Davanagere) ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದಾಗಿ ಉಪಚುನಾವಣೆ (By Election) ನಡೆದಿದ್ದು, ಇಂದು ಅದರ ಫಲಿತಾಂಶ ಹೊರಬೀಳಲಿದೆ.
ಬಾಗಲಕೋಟೆ ತೋಟಗಾರಿಕೆ ವಿವಿಯಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. ಮತ ಎಣಿಕೆ ಕೇಂದ್ರಕ್ಕೆ ಡಿಸಿ ಸಂಗಪ್ಪ, ಎಸ್ಪಿ ಸಿದ್ದಾರ್ಥ್ ಗೋಯೆಲ್, ಚುನಾವಣಾ ವೀಕ್ಷಕರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಮತ ಎಣಿಕೆ ಕೇಂದ್ರದ ವ್ಯಾಪ್ತಿಯಲ್ಲಿ ಬಾಂಬ್ ಸ್ಕ್ವಾಡ್, ಹಾಗೂ ಶ್ವಾನ ದಳದಿಂದ ಸ್ಥಳ ತಪಾಸಣೆ ನಡೆಸಲಾಗಿದೆ.
ಈ ಕುರಿತು ಬಾಗಲಕೋಟೆ ಡಿಸಿ ಸಂಗಪ್ಪ ಮಾತನಾಡಿ, ಮತ ಎಣಿಕೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ. 63 ಜನ ಮತ ಎಣಿಕೆ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ಬೆಳಗ್ಗೆ 8ರಿಂದ ಮತ ಎಣಿಕೆ ಆರಂಭವಾಗಲಿದೆ. ಒಟ್ಟು 14 ಟೇಬಲ್ಗಳು 23 ಸುತ್ತು ಮತ ಎಣಿಕೆ ನಡೆಯಲಿದೆ. ಅಭ್ಯರ್ಥಿಗಳು, ಚುನಾವಣಾ ಏಜೆಂಟ್ಗಳು ಬೆಳಗ್ಗೆ ಏಳು ಗಂಟೆಗೆ ಮತ ಎಣಿಕೆ ಕೇಂದ್ರಕ್ಕೆ ಬರಬೇಕು. ಅವರ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂ ಓಪನ್ ಮಾಡಲಾಗುತ್ತದೆ. ಮತ ಎಣಿಕೆಗೆ ಎಲ್ಲ ರೀತಿಯಿಂದ ನಾವು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದಿದ್ದಾರೆ.
ಬಾಗಲಕೋಟೆಯಲ್ಲಿ ಒಟ್ಟು 2,59,797 ಮತದಾರರಿದ್ದಾರೆ. ಒಟ್ಟು 1,78,265 ಮತದಾನ ಆಗಿದೆ. ಈ ಪೈಕಿ 88,241 ಪುರುಷರು ಹಾಗೂ 90,024 ಮಹಿಳೆಯರು ಮತದಾನ ಮಾಡಿದ್ದಾರೆ.
ಬಾಗಲಕೋಟೆಯಲ್ಲಿ ಹೆಚ್ವೈ ಮೇಟಿ ಅವರ ಅಕಾಲಿಕ ನಿಧನದಿಂದಾಗಿ ಉಪಚುನಾವಣೆ ನಡೆದಿತ್ತು. ಮೇಟಿ ಪುತ್ರ ಉಮೇಶ್ ಮೇಟಿ ಬಿಜೆಪಿಯ ವೀರಣ್ಣ ಚರಂತಿಮಠ ನಡುವೆ ನೇರ ಫೈಟ್ ಇದೆ. ಯಾರೇ ಗೆದ್ದರೂ ಗೆಲುವಿನ ಅಂತರ ಕಡಿಮೆ ಇರಲಿದೆ ಎನ್ನಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ-ಡಿಸಿಎಂ ಡಿಕೆಶಿಯ ಪ್ರತಿಷ್ಠೆ ಪಣಕ್ಕಿದೆ. ಇಂದು 23 ಸುತ್ತಿನ ಮತ ಎಣಿಕೆ ನಡೆಯಲಿದೆ.
ಇಡೀ ರಾಜ್ಯದ ಗಮನ ಸೆಳೆದ ದಾವಣಗೆರೆ ದಕ್ಷಿಣದ ಚುನಾವಣಾ ಕದನದ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದೆ. ದಾವಣಗೆರೆಯ ಪಿಬಿ ರಸ್ತೆಯಲ್ಲಿರುವ ಡಿ.ಆರ್.ಆರ್ ಶಾಲೆಯ ಆವರಣದಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, ಚುನಾವಣಾಧಿಕಾರಿ ಸಂತೋಷ್ ಕುಮಾರ್ ಹಾಗೂ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ. ಬೆಳಗ್ಗೆ ಸರಿಯಾಗಿ 7:30ಕ್ಕೆ ಅಭ್ಯರ್ಥಿಗಳ ಏಜೆಂಟರ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂ ಓಪನ್ ಮಾಡಲಾಗುತ್ತದೆ. ಮತ ಎಣಿಕೆಗಾಗಿ ಒಟ್ಟು 14 ಟೇಬಲ್ಗಳನ್ನು ಸ್ಥಾಪಿಸಲಾಗಿದೆ. ಬೆಳಗ್ಗೆ 8 ಗಂಟೆಗೆ ಮೊದಲು ಅಂಚೆ ಮತಗಳ ಎಣಿಕೆ ಆರಂಭವಾಗಲಿದೆ. ನಂತರ 8:30ಕ್ಕೆ ಇವಿಎಂ ಮಷಿನ್ಗಳ ಕೌಂಟಿಂಗ್ ಶುರುವಾಗಲಿದ್ದು, ಒಟ್ಟು 21 ಸುತ್ತುಗಳಲ್ಲಿ ಫಲಿತಾಂಶ ಹೊರಬೀಳಲಿದೆ. ಪ್ರತಿ ಟೇಬಲ್ಗೆ ಓರ್ವ ಮೈಕ್ರೋ ಅಬ್ಸರ್ವರ್ ಸೇರಿದಂತೆ ನಾಲ್ವರು ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಪ್ರತಿಯೊಂದು ಟೇಬಲ್ಗೂ ಸಿಸಿ ಕ್ಯಾಮರಾ ಕಣ್ಗಾವಲು ಇರಲಿದೆ.
ಇನ್ನು ಈ ಬಾರಿ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ 2,31,072 ಮತದಾರರಲ್ಲಿ 1,58,131 ಮತದಾರರು ಮತ ಚಲಾಯಿಸಿದ್ದು, ಈ ಬಾರಿ ಶೇಕಡವಾರು 68.43% ರಷ್ಟು ಮತದಾನವಾಗಿದೆ. ಆದರೆ ಗ್ರಾಮಾಂತರ ಭಾಗದಲ್ಲಿ ಉತ್ತಮ ಮತದಾನವಾಗಿದ್ದು, ನಗರ ಪ್ರದೇಶದಲ್ಲಿ ಕಡಿಮೆ ಮತದಾನವಾಗಿದೆ. ಕಣದಲ್ಲಿರುವ 25 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. ಎಲ್ಲಾ ಪಕ್ಷಗಳ ಕಾರ್ಯಕರ್ತರು ಸಾಕಷ್ಟು ಜನರು ಜಮಾಯಿಸುವ ಸಾಧ್ಯತೆ ಹಿನ್ನಲೆ ಪೊಲೀಸ್ ಭದ್ರತೆಯನ್ನು ವಹಿಸಲಾಗಿದೆ.
ಮತ ಎಣಿಕೆ ಕೇಂದ್ರದ ಸುತ್ತ ಮೂರು ಹಂತದ ಭದ್ರತೆ ಏರ್ಪಡಿಸಲಾಗಿದೆ. ಮೊದಲ ಹಂತದಲ್ಲಿ ಸಿಆರ್ಪಿಎಫ್ ಪೊಲೀಸರು, ಎರಡನೇ ಹಂತದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಮೂರನೇ ಹಂತದಲ್ಲಿ ಸ್ಥಳೀಯ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಮತ ಎಣಿಕೆ ಕೇಂದ್ರದ ಎದುರಿನ ರಸ್ತೆಯನ್ನು ಬಂದ್ ಮಾಡಿ ವಾಹನ ಮುಕ್ತ ವಲಯ’ ಎಂದು ಘೋಷಿಸಲಾಗಿದ್ದು, ಸಾರ್ವಜನಿಕ ಸಂಚಾರಕ್ಕೆ ಮಾರ್ಗ ಬದಲಾವಣೆ ಮಾಡಲಾಗಿದೆ.
ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಿರುವ ಜಿಲ್ಲಾಡಳಿತ, ಸಿಬ್ಬಂದಿ ಮತ್ತು ಏಜೆಂಟ್ಗಳಿಗೆ ಕ್ಯೂಆರ್ ಕೋಡ್ ಇರುವ ಗುರುತಿನ ಚೀಟಿ ಕಡ್ಡಾಯಗೊಳಿಸಿದೆ. ಅಲ್ಲದೆ, ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಗೆದ್ದ ಅಭ್ಯರ್ಥಿಗಳು ಯಾವುದೇ ರೀತಿಯ ಸಂಭ್ರಮಾಚರಣೆ ಅಥವಾ ಮೆರವಣಿಗೆ ಮಾಡುವಂತಿಲ್ಲ ಎಂದು ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಒಟ್ಟಾರೆಯಾಗಿ ದಾವಣಗೆರೆ ದಕ್ಷಿಣದ ಕೋಟೆಯನ್ನು ಶಾಮನೂರು ಕುಟುಂಬ ಉಳಿಸಿಕೊಳ್ಳುತ್ತಾ ಅಥವಾ ಬಿಜೆಪಿ ಇತಿಹಾಸ ಬರೆಯುತ್ತಾ ಅನ್ನೋದು ಕಾದು ನೋಡಬೇಕಿದೆ.












