ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕೊರೊನಾ ಸೋಂಕು ತಗುಲಿರುವ ಶಂಕೆಯ ಮೇರೆಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದ 50 ಮಂದಿಯ ವರದಿಯೂ ಕೊರೊನಾ ನೆಗೆಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ಆರ್. ಲತಾ ಅವರು ತಿಳಿಸಿದ್ದಾರೆ.
ಜಿಲ್ಲೆಯ ಗೌರಿಬಿದನೂರಿನಲ್ಲಿ 10 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಅವರಲ್ಲಿ ಒರ್ವ 70 ವರ್ಷದ ವೃದ್ಧೆ ಮೃತಪಟ್ಟಿದ್ದರು. ಹೀಗಾಗಿ 10 ಮಂದಿ ಸೊಂಕಿತರಿಂದ ಪ್ರಥಮ ಸಂಪರ್ಕಕ್ಕೆ ಗುರಿಯಾಗಿದ್ದ ಅವರ ಕುಟುಂಬದ ಸದಸ್ಯರಲ್ಲಿ 38 ಮಂದಿಯನ್ನ ಹೈ ರಿಸ್ಕ್ ಕ್ವಾರಂಟೈನ್ ಎಂದು ಗುರುತಿಸಿ ಪರೀಕ್ಷಗೆ ಒಳಪಡಿಸಲಾಗಿತ್ತು. ತದನಂತರ ಈ 28 ಮಂದಿ ಜೊತೆ ಸಂಪರ್ಕಕ್ಕೆ ಒಳಗಾಗಿದ್ದ 12 ಮಂದಿಯನ್ನ ಸಹ ಹಾಸ್ಪಿಟಲ್ ಕ್ವಾರಂಟೈನ್ ಮಾಡಲಾಗಿತ್ತು.
ಪ್ರಥಮ ಸಂಪರ್ಕಿತರ 38 ಮಂದಿಯ ರಕ್ತ ಮಾದರಿ ಹಾಗೂ ಗಂಟಲು ದ್ರವ ಪರೀಕ್ಷಗೆ ಕಳುಹಿಸಲಾಗಿತ್ತು. ಇಂದು ಈ 38 ಮಂದಿಯ ಕೊರೊನಾ ಪರೀಕ್ಷಾ ವರದಿ ಜಿಲ್ಲಾಢಳಿತದ ಕೈ ಸೇರಿದ್ದು, ಎಲ್ಲರ ವರದಿಯೂ ನೆಗಟಿವ್ ಬಂದಿದೆ. 38 ಮಂದಿಯ ವರದಿ ನೆಗಟಿವ್ ಬಂದಿರೋದ್ರಿಂದ ಅವರ ಸಂಪರ್ಕಕ್ಕೆ ಒಳಗಾಗಿರೋ 12 ಮಂದಿ ಸಹ ಸೇಫ್ ಆಗಿದ್ದಾರೆ. ಹೀಗಾಗಿ ಸದ್ಯ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 10ರಲ್ಲೇ ಇದೆ. ಅದು ಎರಡು ಕುಟುಂಬಗಳ ಸದಸ್ಯರಲ್ಲೇ ಇದ್ದು ಸಮುದಾಯದ ಹಂತಕ್ಕೆ ಹರಡಿಲ್ಲ ಅನ್ನೋದು ಸ್ಪಷ್ಟವಾಗಿದೆ.
ಈಗಾಗಲೇ ವಿದೇಶಗಳಿಂದ ಆಗಮಿಸಿದ್ದ 200 ಮಂದಿಯ ಪೈಕಿ ಬಹುತೇಕರ 14 ದಿನಗಳ ಕ್ವಾರಂಟೈನ್ ಅವಧಿ ಸಹ ಪೂರ್ಣಗೊಂಡಿದೆ. ಹೀಗಾಗಿ ಜಿಲ್ಲೆ ರೆಡ್ಝೋನ್ನಲ್ಲಿದ್ದರೂ ಕೊರೊನಾ ಸೋಂಕಿತ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ. ಕೊರೊನಾ ವೈರಸ್ ಹರುಡವಿಕೆಯನ್ನ ತಡೆಯುವಲ್ಲಿ ಜಿಲ್ಲಾಢಳಿತ ಯಶಸ್ವಿಯಾಗಿದ್ದು, ಜಿಲ್ಲೆಯ ಜನತೆ ಆತಂಕಕ್ಕೆ ಒಳಗಾಗದಂತೆ ಡಿಸಿ ಆರ್. ಲತಾ ಮನವಿ ಮಾಡಿಕೊಂಡಿದ್ದಾರೆ. ಹಾಗೆಯೇ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ ಅಂತ ಜನ ದಯವಿಟ್ಟು ಬೀದಿಗೆ ಬರಬೇಡಿ ಇನ್ನೂ ಲಾಕ್ಡೌನ್ ಅವಧಿ ಪೂರ್ಣಗೊಳ್ಳುವವರೆಗೂ ಮನೆಯಲ್ಲಿದ್ದು ಸಹಕರಿಸಿ ಎಂದು ಡಿಸಿ ಕೇಳಿಕೊಂಡಿದ್ದಾರೆ.