– 5 ರಾಜ್ಯಗಳಿಂದಲೇ ಲಾಕ್ಡೌನ್ ನಿರ್ಧಾರ?
ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿದೆ. ಆದರೆ ಕೇಂದ್ರ ಸರ್ಕಾರಕ್ಕೆ ಮಾತ್ರ ಇಡೀ ದೇಶಕ್ಕಿಂತ ಐದು ರಾಜ್ಯಗಳ ಪರಿಸ್ಥಿತಿ ಚಿಂತಿಗೀಡು ಮಾಡಿದ್ದು, ಈ ರಾಜ್ಯಗಳೇ ಲಾಕ್ಡೌನ್ ವಿಸ್ತರಣೆ ಮಾಡಲು ಕಾರಣವಾಗಿದೆಯಂತೆ. ಈ ರಾಜ್ಯಗಳು ಮುಂದೆ ಏಪ್ರಿಲ್ 20ರ ಬಳಿಕ ಸರ್ಕಾರ ನೀಡುವ ವಿನಾಯಿತಿಯನ್ನು ನಿರ್ಧರಿಸಲಿದೆ.
ಮೇ 3ರವರೆಗೂ ಲಾಕ್ಡೌನ್ ವಿಸ್ತರಣೆಯಾಗಿದೆ. ಹೀಗಾಗಿ ಎಲ್ಲರೂ ಕೂಡ ಲಾಕ್ಡೌನ್ ಅಂತ್ಯದವರೆಗೂ ಮನೆಯಲ್ಲೇ ಇರಬೇಕು. ಅಂದಹಾಗೆ ಪ್ರಧಾನಿ ಮೋದಿ ಲಾಕ್ಡೌನ್ ವಿಸ್ತರಣೆ ಮಾಡೋಕೆ ಐದು ರಾಜ್ಯಗಳು ಕಾರಣ ಎಂದು ತಿಳಿದುಬಂದಿದೆ. ಲಾಕ್ಡೌನ್ ವಿನಾಯಿತಿ ನೀಡಬೇಕು ಅಂದುಕೊಂಡಿದ್ದ ಕೇಂದ್ರ ಸರ್ಕಾರ ಐದು ರಾಜ್ಯಗಳ ಪರಿಸ್ಥಿತಿ ನೋಡಿ ಯಾವ ವಿನಾಯಿತಿಯೂ ಇಲ್ಲದೇ ಲಾಕ್ಡೌನ್ ಮುಂದುವರಿಸಿ ಅಂತ ಘೋಷಿಸಿದ್ದಾರೆ. ಇದನ್ನೂ ಓದಿ: ಧಾರಾವಿ ಸ್ಲಂನಲ್ಲಿ ಕೊರೊನಾ ನಿಯಂತ್ರಣ ಅಸಾಧ್ಯ ಯಾಕೆ? ಜನಸಾಂದ್ರತೆ ಎಷ್ಟಿದೆ?
ದೇಶಕ್ಕೆ ಪಂಚರಾಜ್ಯ ಕಂಟಕ
1. ಮಹಾರಾಷ್ಟ್ರ – 2,455 ಕೇಸ್
2. ದೆಹಲಿ – 1,561 ಕೇಸ್
3. ತಮಿಳುನಾಡು – 1,204 ಸೋಂಕಿತರು
4. ಮಧ್ಯಪ್ರದೇಶ – 741 ಪ್ರಕರಣ
5. ಗುಜರಾತ್ – 650 ಕೇಸ್
ಮಹಾರಾಷ್ಟ್ರದಲ್ಲಿ ದೇಶದ ಅತಿ ಹೆಚ್ಚು ಕೊರೊನಾ ಸೋಂಕಿತರು ಇರುವುದು. ನಂತರ ದೆಹಲಿಯಲ್ಲಿ 1561 ಕೇಸ್ಗಳಿರೋದು ಕೇಂದ್ರ ಸರ್ಕಾರಕ್ಕೆ ಚಿಂತೆಗೀಡು ಮಾಡಿದೆ. ಇನ್ನೂ ತಮಿಳುನಾಡಲ್ಲಿ ಸದ್ಯ 1204 ಕೊರೊನಾ ಪೀಡಿತರಿದ್ದರೆ, ಮಧ್ಯಪ್ರದೇಶದಲ್ಲಿ 741, ಗುಜರಾತ್ನಲ್ಲಿ 650 ಕೇಸ್ಗಳಿವೆ. ಇಲ್ಲಿ ಚೇತರಿಕೆಗಿಂತ ಪ್ರತಿದಿನ ಸೋಂಕಿಗೆ ಒಳಪಡುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ.
ಚೀನಾದ ವುಹಾನ್ ಆಗುತ್ತಾ ಮಹಾರಾಷ್ಟ್ರ?
ಮಹಾರಾಷ್ಟ್ರ, ದೆಹಲಿಯಲ್ಲಿ ಸದ್ಯ ಸೋಂಕಿನ ಪ್ರಮಾಣ ಏರಿಕೆ ಕಾಣುತ್ತಲೇ ಇದೆ. ದೆಹಲಿಯಲ್ಲಿ ಒಂದೇ ದಿನ 350ಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಮುಂಬೈ ಚೀನಾದ ವುಹಾನ್ ನಗರವಾಗಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಧಾರಾವಿ ಸ್ಲಂನಲ್ಲಿ ದಿನದಿಂದ ದಿನಕ್ಕೆ ಸೋಂಕು ಹೆಚ್ಚುತ್ತಿದ್ದು, ಮಹಾರಾಷ್ಟ್ರದಲ್ಲಿ ಸೋಂಕಿತ ಪ್ರಮಾಣ ಏರಿಕೆ ನಿಂತಿಲ್ಲ. ಮಂಗಳವಾರ ಲಾಕ್ಡೌನ್ ವಿಸ್ತರಿಸಿದ್ದನ್ನ ವಿರೋಧಿಸಿ ಮುಂಬೈನ ಬಾಂದ್ರಾ ಪ್ರದೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕೂಲಿ ಕಾರ್ಮಿಕರು ಬೀದಿಗೆ ಬಂದು ಪ್ರತಿಭಟನೆ ನಡೆಸಿದರು. ದೆಹಲಿಯ ಮರ್ಕಜ್ ಪ್ರಕರಣ ಬಳಿಕ ಅತಿ ಹೆಚ್ಚು ಆತಂಕ ಸೃಷ್ಟಿಸಿರುವ ಘಟನೆ ಇದು ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದು, ಸೋಂಕು ಮತ್ತಷ್ಟು ಹರಡುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಗೃಹ ಸಚಿವ ಅಮಿತ್ ಶಾ ಈ ಐದು ರಾಜ್ಯಗಳಿಂದ ಪ್ರತಿನಿತ್ಯ ವಿಶೇಷ ವರದಿ ತರಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಈ ರಾಜ್ಯಗಳನ್ನು ಆಧರಿಸಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲು ಚಿಂತನೆ ನಡೆಸಿದ್ದಾರೆ. ಹೀಗಾಗಿ ಏಪ್ರಿಲ್ 20ರ ಬಳಿಕ ಸಿಗಲಿರುವ ವಿನಾಯತಿಯನ್ನು ಈ ರಾಜ್ಯಗಳೇ ನಿರ್ಧರಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.