ಹಾಸನ: ಪೊಲೀಸರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸಿದ ಪರಿಣಾಮ ಅಕ್ರಮ ಗೋಸಾಗಾಟ (Cow Transportation) ಮಾಡುತ್ತಿದ್ದ ಕಂಟೈನರ್ (Container) ಪಲ್ಟಿಯಾದ ಘಟನೆ ಹಾಸನದಲ್ಲಿ (Hassan) ನಡೆದಿದೆ.
ಜಿಲ್ಲೆಯ ಚನ್ನರಾಯಪಟ್ಟಣ (Channarayapatna) ತಾಲೂಕಿನ ಹಿರಿಸಾವೆ ಬಳಿ ತಡರಾತ್ರಿ ಈ ಘಟನೆ ನಡೆದಿದ್ದು, ಕಂಟೈನರ್ನಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿದ್ದರು. ಹೊಳೆನರಸೀಪುರದಿಂದ ಬೆಂಗಳೂರಿನ ಕಡೆಗೆ ಅಕ್ರಮವಾಗಿ ಗೋಸಾಗಾಣಿಕೆ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಪೊಲೀಸರು ವಾಹನವನ್ನು ಅಡ್ಡಗಟ್ಟಿದ್ದು, ವಾಹನ ನಿಲ್ಲಿಸದೇ ಎಸ್ಕೇಪ್ ಆಗಲು ಯತ್ನಿಸಿದ್ದಾರೆ. ಇದನ್ನೂ ಓದಿ: ಗುರುವಾರ ಮಧ್ಯಾಹ್ನ ಕಂಠೀರವ ಸ್ಟೇಡಿಯಂನಲ್ಲಿ ಸಿದ್ದರಾಮಯ್ಯ ಪ್ರಮಾಣವಚನ
ಪೊಲೀಸರು ವಾಹನವನ್ನು ಬೆನ್ನಟ್ಟಿಕೊಂಡು ಹೋಗಿದ್ದಾರೆ. ಈ ವೇಳೆ ಬ್ಯಾಟರಹಳ್ಳಿ ಗ್ರಾಮದ ಬಳಿ ಇದ್ದ ರೋಡ್ ಹಂಪ್ ಕಾಣದೆ ಕಂಟೈನರನ್ನು ಚಲಾಯಿಸಿದ್ದು, ಚಾಲಕನ ನಿಯಂತ್ರಣ ತಪ್ಪಿ ಕಂಟೈನರ್ ಅಲ್ಲೇ ಇದ್ದ ಮನೆಯ ಕಾಂಪೌಂಡ್ಗೆ ಗುದ್ದಿ ಪಲ್ಟಿಯಾಗಿದೆ. ಚಾಲಕ ಹಾಗೂ ನಿರ್ವಾಹಕ ವಾಹನ ಬಿಟ್ಟು ಪಾರಾರಿಯಾಗಿದ್ದು, ಕಂಟೈನರ್ನಲ್ಲಿದ್ದ 40 ಹಸು, ಕರು ಹಾಗೂ ಎಮ್ಮೆಗಳ ಪೈಕಿ 17 ಗೋವುಗಳು ಸಾವನ್ನಪ್ಪಿವೆ. ಇದನ್ನೂ ಓದಿ: ಸಿಎಂ ಪಟ್ಟಕ್ಕೆ ಸಿದ್ದರಾಮಯ್ಯ ಆಯ್ಕೆ – ಗ್ಯಾರಂಟಿ ಘೋಷಣೆ ಕೂಗಿ ಸಂಭ್ರಮಿಸಿದ ಅಭಿಮಾನಿಗಳು
ಉಳಿದ ಗೋವುಗಳನ್ನು ಪೊಲೀಸರು ರಕ್ಷಣೆ ಮಾಡಿದ್ದು, ಅವುಗಳನ್ನು ಕಡೂರಿನ ಗೋಶಾಲೆಗೆ ಬಿಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದ್ದಾರೆ. ಅಲ್ಲದೇ ಮೂವರು ಆರೋಪಿಗಳ ವಿರುದ್ಧ ಹಿರಿಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಅಣ್ಣ ಬಹಳ ಕಷ್ಟಪಟ್ಟಿದ್ದಾನೆ, ನಾವ್ಯಾವತ್ತೂ ವಿಧಾನಸೌಧಕ್ಕೆ ಹೋಗಲ್ಲ: ಸಿದ್ದರಾಮಯ್ಯ ಸಹೋದರ