ನವದೆಹಲಿ: ಸಂದರ್ಶನವೊಂದರಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ʼರಾಷ್ಟ್ರಪತ್ನಿʼ ಎಂದು ಹೇಳುವ ಮೂಲಕ ಭಾರೀ ಟೀಕೆಗೆ ಗುರಿಯಾಗಿದ್ದ ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಅವರು ಕ್ಷಮೆಯಾಚಿಸಿದ್ದಾರೆ. ಈ ಸಂಬಂಧ ರಾಷ್ಟ್ರಪತಿ ಮುರ್ಮು ಅವರಿಗೆ ಪತ್ರ ಬರೆದು ಚೌಧರಿ ಕ್ಷಮೆ ಕೋರಿದ್ದಾರೆ.
ನೀವು ಹೊಂದಿರುವ ಸ್ಥಾನದ ಬಗ್ಗೆ ತಪ್ಪಾಗಿ ಪದ ಬಳಸಿ ಮಾತನಾಡಿದ್ದಕ್ಕೆ ವಿಷಾದಿಸುತ್ತೇನೆ. ಬಾಯಿತಪ್ಪಿ ಈ ಹೇಳಿಕೆ ಬಂದಿದೆಯಷ್ಟೆ. ನನ್ನ ಹೇಳಿಕೆಗೆ ಕ್ಷಮೆಯಾಚಿಸುತ್ತೇನೆ. ನೀವು ಕ್ಷಮೆಯನ್ನು ಸ್ವೀಕರಿಸುವಂತೆ ವಿನಂತಿಸುತ್ತೇನೆ ಎಂದು ಚೌಧರಿ ಅವರು ಬುಡಕಟ್ಟು ಸಮುದಾಯದಿಂದ ದೇಶದ ಮೊದಲ ರಾಷ್ಟ್ರಪತಿಯಾಗಿರುವ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಸಿಂಗಾಪುರ ಭೇಟಿ ರದ್ದು – ನಾನು ಯಾರನ್ನೂ ದೂಷಿಸಲ್ಲ: ಕೇಜ್ರಿವಾಲ್
ತಮ್ಮ ಪಕ್ಷದ ನಾಯಕಿ ಬಗ್ಗೆ ಚೌಧರಿ ನೀಡಿದ್ದ ಹೇಳಿಕೆಗೆ ಬಿಜೆಪಿ ಭಾರೀ ಟೀಕೆ ವ್ಯಕ್ತಪಡಿಸಿತ್ತು. ಅಲ್ಲದೇ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಸಹ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಒತ್ತಾಯಿಸಿತ್ತು.
ಇದು ಬಾಯಿ ತಪ್ಪಿ ಹೇಳಿದ ಮಾತಲ್ಲ. ಸಂದರ್ಶನದ ದೃಶ್ಯಾವಳಿಗಳನ್ನು ನೋಡಿದರೆ, ಅಧೀರ್ ರಂಜನ್ ಚೌಧರಿ ಅವರು ರಾಷ್ಟ್ರಪತಿಯನ್ನು ಎರಡು ಬಾರಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ನಂತರ ಅವರನ್ನು ರಾಷ್ಟ್ರಪತ್ನಿ ಎಂದು ಕರೆದಿದ್ದಾರೆ. ಇಂತಹ ವಿಷಯಗಳನ್ನು ಲಘುವಾಗಿ ಸ್ವೀಕರಿಸಬಾರದು ಎಂದು ಕಾನೂನು ಸಚಿವ ಕಿರಣ್ ರಿಜಿಜು ಹೇಳಿಕೆ ನೀಡಿದ್ದರು. ಅಲ್ಲದೇ ಚೌಧರಿ ವಿರುದ್ಧ ಸಂಸತ್ನಲ್ಲಿ ಗುರುವಾರ ಬಿಜೆಪಿ ನಾಯಕರು ಗದ್ದಲ ಎಬ್ಬಿಸಿದ್ದರು. ಇದನ್ನೂ ಓದಿ: ಭಾರೀ ಬೆಂಕಿಗೆ ಹೊತ್ತಿ ಉರಿದ ಮುಂಬೈ ಶಾಪ್ – ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ