ಬೆಂಗಳೂರು: ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಮಹಿಳೆಯರಿಗೆ ಫ್ರೀ ಬಸ್ (Karnataka Free Bus Scheme) ಯೋಜನೆ ಜಾರಿ ಸಂಬಂಧ ಸಾರಿಗೆ ಇಲಾಖೆ ಕೆಲಸ ಮಾಡುತ್ತಿದೆ. ಇನ್ನೆರಡು ದಿನದಲ್ಲಿ ಯೋಜನೆಯ ಖರ್ಚು, ವೆಚ್ಚದ ಸಂಪೂರ್ಣ ವರದಿಯನ್ನು ಸರ್ಕಾರದ ಮುಂದಿಡಲಿದೆ.
ಮೂರು ದಿನದ ಹಿಂದೆ ಗ್ಯಾರಂಟಿಗಳ (Congress Guarantee) ಜಾರಿ ವಿಚಾರವಾಗಿ ಆಯಾ ಇಲಾಖೆ ಹಣಕಾಸು ಮುಖ್ಯ ಅಧಿಕಾರಿಗಳ ಜೊತೆ ಸಿಎಂ, ಡಿಸಿಎಂ ಸಭೆ ಮಾಡಿದ್ದಾರೆ. ಸಭೆಯಲ್ಲಿ ಈಗಾಗಲೇ ಯೋಜನೆ ಜಾರಿಗೆ ತಗಲುವ ವೆಚ್ಚ, ಅನುಷ್ಠಾನ, ಕ್ರಮಗಳ ಬಗ್ಗೆ ಮಾಹಿತಿ ಕೇಳಿರುವ ಸರ್ಕಾರ ಈ ಬಗ್ಗೆ ವರದಿ ಸಿದ್ದಪಡಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿತ್ತು.
ಸಾರಿಗೆ ಇಲಾಖೆ ಅಧಿಕಾರಿಗಳು, ಸಾರಿಗೆ ಇಲಾಖೆಗೆ ಸದ್ಯ ಸ್ಕೀಂನಿಂದ ತಗಲುವ ವೆಚ್ಚ, ಜಿಲ್ಲೆ, ತಾಲೂಕುವಾರು ಪ್ರತಿನಿತ್ಯ ಸಂಚರಿಸುವ ಮಹಿಳೆಯರ ಸಂಖ್ಯೆ, ಈ ಎಲ್ಲ ಅಂಶಗಳ ಆಧಾರದ ಮೇಲೆ ವರದಿ ಸಿದ್ದಪಡಿಸುತ್ತಿದ್ದಾರೆ. 2-3 ದಿನದ ಒಳಗಡೆ ಸಂಪೂರ್ಣ ವರದಿ ಸಿದ್ದರಾಮಯ್ಯ ಅವರ ಕೈಸೇರಲಿದೆ.
ಮಾರ್ಗಸೂಚಿಯಲ್ಲಿ ಏನಿರಬಹುದು?
ಐಷಾರಾಮಿ ಬಸ್ಗಳಲ್ಲಿ ಫ್ರೀ ಓಡಾಟಕ್ಕೆ ನಿರ್ಬಂಧ ವಿಧಿಸಲಾಗಿದ್ದು ಸರ್ಕಾರಿ ಬಸ್ನಲ್ಲಿ ಸಂಚರಿಸುವ ಮಹಿಳೆಯರಿಗೆ ಪ್ರತ್ಯೇಕ ಪಾಸ್ ನೀಡಲು ಚಿಂತನೆ ನಡೆದಿದೆ.
ಉಚಿತ ಪ್ರಯಾಣ ಯೋಜನೆಗೆ ಅರ್ಜಿ ಸಲ್ಲಿಸುವ ಅಗತ್ಯ ಇಲ್ಲ. ಉಚಿತ ಬಸ್ ಬಳಸಲು ಮಹಿಳಾ ಫಲಾನುಭವಿಗಳಿಗೆ ಆಧಾರ್ ಕಾರ್ಡ್ ಕಡ್ಡಾಯ. ಎಲ್ಲಾ ಪ್ರೀಮಿಯಂ ಬಸ್ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವ ಸಾಧ್ಯತೆಯಿದೆ. ಇದನ್ನೂ ಓದಿ: ಇವತ್ತೇ ಸಿದ್ದು ಸಂಪುಟಕ್ಕೆ ಕ್ಲೈಮ್ಯಾಕ್ಸ್ – 24 ಸಂಭವನೀಯ ಸಚಿವರು ಯಾರು?
ಬಿಎಂಟಿಸಿಯಲ್ಲಿ ಕೇವಲ ದುಡಿಯುವ ವರ್ಗದ ಮಹಿಳೆಯರಿಗಷ್ಟೇ ಉಚಿತ ಇರಲಿದ್ದು ಇತರೇ ಬಸ್ಗಳಲ್ಲಿ ಇಂತಿಷ್ಟು ಕಿಲೋ ಮೀಟರ್ ಒಳಗಡೆ ಸಂಚಾರ ನಿಯಮ ಬರುವ ಸಾಧ್ಯತೆಯಿದೆ. ಬಿಎಂಟಿಸಿ, ಕೆಎಸ್ಆರ್ಟಿಸಿ, ವಾಯುವ್ಯ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ ತಗುಲುವ ಹೊರೆಯನ್ನು ಸರ್ಕಾರ ಭರಿಸಲು ನಿರ್ಧಾರ ತೆಗೆದುಕೊಂಡಿದೆ.
ನಾಯಕರು ಹೇಳಿದ್ದು ಏನು?
ಸಿದ್ದರಾಮಯ್ಯ, ಡಿಕೆಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು ಯಾವುದೇ ಷರತ್ತು ಪ್ರಕಟಿಸದೇ ರಾಜ್ಯದ ಯಾವ ಭಾಗಕ್ಕೂ ಹೋಗಬೇಕಾದರೂ ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಉಚಿತವಾಗಿ ಹೋಗಬಹುದು. ಧರ್ಮಸ್ಥಳಕ್ಕೆ ಹೋಗುವಾಗ, ಅತ್ತೆ ಮನೆಗೆ ಹೋಗುವಾಗ, ತವರು ಮನೆಗೆ ಹೋಗುವಾಗ, ಗಂಡನ ಮನೆಗೆ ಹೋಗುವಾಗ, ಮೈಸೂರಿಗೆ ಹೋಗುವಾಗ, ಬೆಂಗಳೂರಿಗೆ ಹೋಗುವಾಗ ಮಹಿಳೆಯರು ಟಿಕೆಟ್ ತೆಗೆದುಕೊಳ್ಳುವಂತಿಲ್ಲ ಎಂದು ಡಿಕೆ ಶಿವಕುಮಾರ್ ಭಾಷಣದಲ್ಲಿ ಆಶ್ವಾಸನೆ ನೀಡಿದ್ದರು.