ಬೆಳಗಾವಿ: ಕಾರು ಪಾರ್ಕಿಂಗ್ ಮಾಡುವ ವಿಚಾರಕ್ಕೆ ಶುರುವಾದ ಗಲಾಟೆ ವ್ಯಕ್ತಿಯೋರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಳಗಾವಿ ಹೊರವಲಯದ ಗೌಂಡವಾಡ ಗ್ರಾಮದಲ್ಲಿ ನಡೆದಿದೆ.
ಗೌಂಡವಾಡ ಗ್ರಾಮದ ಸತೀಶ್ ಪಾಟೀಲ್(37) ಕೊಲೆಯಾದ ವ್ಯಕ್ತಿಯಾಗಿದ್ದಾರೆ. ನಿನ್ನೆ ತಡರಾತ್ರಿ ಕಾರು ಪಾರ್ಕಿಂಗ್ ವಿಚಾರಕ್ಕೆ ನಡೆದ ಗಲಾಟೆಯು ಗೌಂಡವಾಡ ಗ್ರಾಮದ ನಿವಾಸಿ ಸತೀಶ್ ಪಾಟೀಲ್ ಅವರ ಕೊಲೆಯಲ್ಲಿ ಅಂತ್ಯವಾಗಿದೆ. ಕೊಲೆ ನಂತರ ನಡೆದ ಹಿಂಸಾಚಾರದಲ್ಲಿ ಹತ್ತಾರು ವಾಹನಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು, ಇದಕ್ಕೆ ಸಂಬಂಧಿಸಿದಂತೆ ಸುಮಾರು 20 ಮಂದಿಯನ್ನು ಪೊಲೀಸರು ನಸುಕಿನ ಜಾವ ಬಂಧಿಸಿದ್ದಾರೆ ಎನ್ನಲಾಗಿದೆ. ಗ್ರಾಮದ ಬೈರೋನಾಥ ದೇವಸ್ಥಾನಕ್ಕೆ ಸೇರಿದ ಜಮೀನು ಉಳಿಸಿಕೊಳ್ಳಲು ಸತೀಶ್ ಪಾಟೀಲ್ ಹೋರಾಟ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಕ್ಯಾಂಟರ್- ಕಾರು ಮುಖಾಮುಖಿ ಡಿಕ್ಕಿ; ಧರ್ಮಸ್ಥಳಕ್ಕೆ ತೆರಳುತ್ತಿದ್ದ ತಂದೆ, ಮಗ ಸಾವು
ಹಿಂಸಾಚಾರಕ್ಕೆ ಕಾರಣ:
ಸತೀಶ್ ಪಾಟೀಲ್ ಕೊಲೆಯಿಂದ ಕೆರಳಿದ ಗ್ರಾಮಸ್ಥರು ನಾಲ್ಕು ಕಾರು, ಒಂದು ಟ್ರ್ಯಾಕ್ಟರ್, ಎರಡು ಟೆಂಪೊ ಹಾಗೂ ಹುಲ್ಲಿನ ಬಣವೆಗೆ ಬೆಂಕಿ ಹಚ್ಚಲಾಗಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಳಗಿನ ಜಾವದವರೆಗೂ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ. ಗ್ರಾಮದ ಹಲವು ಮನೆಗಳ ಮೇಲೂ ಕಲ್ಲು ತೂರಾಟ ನಡೆದಿದೆ. ಹಿಂಸಾಚಾರದಿಂದ ಬೆಚ್ಚಿಬಿದ್ದ ಕೆಲವು ಗ್ರಾಮಸ್ಥರು ರಾತ್ರಿಯೇ ಊರು ತೊರೆದ ಮಾಹಿತಿ ಇದೆ. ಇನ್ನೂ ಕೆಲವರು ಮನೆಗಳಿಗೆ ಒಳಗಿನಿಂದಲೇ ಬೀಗ ಹಾಕಿಕೊಂಡಿದ್ದಾರೆ. ಇದನ್ನೂ ಓದಿ: ಉಕ್ರೇನ್ನಲ್ಲಿ ಮೃತಪಟ್ಟ ನವೀನ್ ಕುಟುಂಬವನ್ನು ಭೇಟಿಯಾಗಲಿರುವ ಪ್ರಧಾನಿ