ಆ ಮಹಿಳೆಯಿಂದಾಗಿ ನಾನು ಮೂರ್ನಾಲ್ಕು ಲಕ್ಷ ರೂಪಾಯಿ ಸಾಲ ಮಾಡಿದ್ದೇವೆ. ಲಿವ್ ಇನ್ ರಿಲೇಷನ್ ಶಿಪ್ ನಿಂದಾಗಿ ನಾನು ಬ್ಲಾಕ್ ಮೇಲ್ ಗೆ ಒಳಗಾಗಿದ್ದೇನೆ. ಮತ್ತೆ ನನ್ನ ಮೇಲೆ ದೂರು ದಾಖಲಾಗಿದೆ ಎನ್ನುತ್ತಲೇ ಕಪಿಲ್ ಶರ್ಮಾ ಶೋ ಸೇರಿದಂತೆ ಹಲವು ಕಾಮಿಡಿ (Comedian) ಶೋಗಳಲ್ಲಿ ನಟಿಸಿರುವ ತೀರ್ಥಾನಂದ (Tirthanand Rao) ವಿಷ (Poison) ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಹಿಂದಿಯ ಹೆಸರಾಂತ ಟಾಕ್ ಶೋ ಮಾಸ್ಟರ್ ಕಪಿಲ್ ಶರ್ಮಾ ಸೇರಿದಂತೆ ಹಲವರೊಂದಿಗೆ ತೆರೆ ಹಂಚಿಕೊಂಡಿರುವ ತೀರ್ಥಾನಂದ ರಾವ್, ಮಹಿಳೆಯೊಬ್ಬರ ಜೊತೆ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿ ಇದ್ದರಂತೆ. ಆ ಮಹಿಳೆಯೇ ಇವರಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದಾರಂತೆ. ಅಲ್ಲದೇ, ಇವರ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ್ದಾರಂತೆ. ಇದರಿಂದಾಗಿ ಮನನೊಂದಿದ್ದೇನೆ ಮತ್ತು ಸಾಲ ಮಾಡಿಕೊಂಡಿದ್ದೇನೆ ಎಂದು ಫೇಸ್ ಬುಕ್ ಲೈವ್ (Facebook Live) ನಲ್ಲಿ ಹೇಳಿಕೊಂಡಿದ್ದಾರೆ ತೀರ್ಥಾನಂದ. ಇದನ್ನೂ ಓದಿ:ಕನಕದಾಸನಾಗಿ ಕಂಗೊಳಿಸಲಿದ್ದಾರೆ ರಿಯಲ್ ಸ್ಟಾರ್ ಉಪೇಂದ್ರ
ತನ್ನ ಸಾವಿಗೆ ಆ ಮಹಿಳೆಯೇ ಕಾರಣವೆಂದೂ ಹೇಳಿರುವ ಅವರು, ವಿಷ ಕುಡಿಯುತ್ತಲೇ ಕಿಡಿಕಾರುತ್ತಾರೆ. ಇದನ್ನು ಗಮನಿಸುವ ಅವರ ಸ್ನೇಹಿತರು ಮತ್ತು ಆಪ್ತರು ಕೂಡಲೇ ಅವರ ಮನೆಗೆ ಧಾವಿಸಿ, ತೀರ್ಥಾನಂದ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಅವರ ಆರೋಗ್ಯದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಹಾಗಾಗಿ ಅಭಿಮಾನಿಗಳು ಸಹಜವಾಗಿಯೇ ಆತಂಕ ವ್ಯಕ್ತಪಡಿಸಿದ್ದಾರೆ.
ತೀರ್ಥಾನಂದ ಈ ರೀತಿ ಮಾಡುತ್ತಾ ಇರುವುದು ಇದೇ ಮೊದಲೇನೂ ಅಲ್ಲ ಎನ್ನಲಾಗುತ್ತಿದೆ. ಮೂರು ವರ್ಷಗಳ ಹಿಂದೆ ಹೀಗೆಯೇ ಫೇಸ್ ಬುಕ್ ಲೈವ್ ಗೆ ಬಂದು ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ಹೇಳಲಾಗುತ್ತಿದೆ. ಹೀಗಾಗಿ ಅವರಿಗೆ ಮಾನಸಿಕ ಕಾಯಿಲೆ ಇರಬಹುದು ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.