ಬೆಂಗಳೂರು: ಒಂದು ದಿನ ಬದುಕಿದರೂ ಪುನೀತ್ ರಾಜ್ಕುಮಾರ್ ಅವರಂತೆ ಬದುಕಬೇಕು ಎಂದು ಹಾಸ್ಯ ನಟ ಸಾಧು ಕೋಕಿಲ ಅವರು ತಿಳಿಸಿದ್ದಾರೆ.
ಇಂದು ಪುನೀತ್ ರಾಜ್ಕುಮಾರ್ ಅವರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರೂಢ ಸ್ವಾಮೀಜಿಗಳ ಕಾರ್ಯಕ್ರಮಕ್ಕೆ ಅಕ್ಟೋಬರ್ 28ರಂದು ಬರಬೇಕೆಂದು ನಾನು ಪುನೀತ್ ರಾಜ್ಕುಮಾರ್ ಅವರನ್ನು ಕೇಳಿಕೊಂಡಿದ್ದೆ. 28ನೇ ತಾರೀಖು ಇದ್ದ ಸುದ್ದಿಗೋಷ್ಠಿಯನ್ನು 27ಕ್ಕೆ ಮಾಡಿ 28ಕ್ಕೆ ನಾನು ಊರಿಗೆ ಹೋಗಬೇಕು ಎಂದು ಪುನೀತ್ ಹೇಳಿದ್ದರು. ಬಹುಶಃ 28ನೇ ತಾರೀಖು ಅಪ್ಪು ಅವರು ಊರಿಗೆ ಹೋಗಿದ್ದರೆ ಇಂದು ಬದುಕಿ ಉಳಿಯುತ್ತಿದ್ದರು ಅನಿಸುತ್ತದೆ. ಆದರೆ ಯಾಕೆ ಹೋಗಲಿಲ್ಲ ಎಂದು ಗೊತ್ತಿಲ್ಲ. ಈ ಜನ ಸಾಗರ ನೋಡಿದರೆ ಅಪ್ಪು ಅವರು ಎಲ್ಲೂ ಹೋಗಿಲ್ಲ ಇಲ್ಲೆ ಇದ್ದಾರೆ ಎಂದೇ ಹೇಳಬಹುದು ಎಂದು ನುಡಿದಿದ್ದಾರೆ. ಇದನ್ನೂ ಓದಿ: ರತ್ನನ್ ಪ್ರಪಂಚ ನೋಡಿ ಕರೆ ಮಾಡಿದ್ರು: ಡಾಲಿ ಧನಂಜಯ್
80 ವರ್ಷ ಬದುಕಲಿ, 100 ವರ್ಷ ಬದುಕಲಿ, ಒಂದು ದಿನ ಬದುಕಲಿ, ಬದುಕಿದರೆ ಅಪ್ಪು ರೀತಿ ಬದುಕಬೇಕು. ಇಷ್ಟು ಪ್ರೀತಿಯನ್ನು ಸಂಪಾದನೆ ಮಾಡಿದ್ದಾರೆ. ಅಪ್ಪು ಅವರನ್ನು ಯಾರು ದ್ವೇಷಿಸುತ್ತಿರಲಿಲ್ಲ ಅಂತಹ ಒಬ್ಬ ನಾಯಕರಾಗಿದ್ದರು. ಡಾ. ರಾಜ್ಕುಮಾರ್ ಅವರನ್ನು ಮುಟ್ಟಿದರೆ ಹೇಗೆ ರೋಮಾಂಚನವಾಗುತ್ತದೆಯೋ, ಅದೇ ರೀತಿ ಪುನೀತ್ ಅವರನ್ನು ಮುಟ್ಟಿದರೆ ಕೂಡ ರೋಮಾಂಚನವಾಗುತ್ತದೆ ಎಂದು ಇತ್ತೀಚೆಗಷ್ಟೆ ಸುದ್ದಿಗೋಷ್ಟಿಯೊಂದರಲ್ಲಿ ಹೇಳಿದ್ದೆ. ಇಡೀ ಚಿತ್ರರಂಗಕ್ಕೆ ಕೈ ಅಲ್ಲ, ಒಂದು ಕಾಲು ಹೊಡೆದುಹೋದಂತೆ ಆಗಿದೆ. ಪುನೀತ್ ರಾಜ್ಕುಮಾರ್ ಅವರು ನಮ್ಮೊಂದಿಗಿಲ್ಲ ಎಂದು ನಾನು ಎಂದಿಗೂ ಹೇಳುವುದಿಲ್ಲ. ಅವರ ಪತ್ನಿ ಹಾಗೂ ಮಕ್ಕಳಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನನಗೆ ಇಂಡಸ್ಟ್ರಿಯಲ್ಲಿ ಮೊದಲು ಕರೆ ಮಾಡಿದ ಸ್ಟಾರ್ ನಟ ಪುನೀತ್: ವಸಿಷ್ಠ ಸಿಂಹ