ಬೆಂಗಳೂರು: ಹೃದಯಾಘಾತದಿಂದ ಶುಕ್ರವಾರ ಸಾವನ್ನಪ್ಪಿದ್ದ ನಟ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಅಂತ್ಯಸಂಸ್ಕಾರ ಇಂದು ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಕುಟುಂಬಸ್ಥರು ಮತ್ತು ಆಪ್ತವಲಯದವರ ಸಮ್ಮುಖದಲ್ಲಿ ನೆರವೇರಿತ್ತು.
ಇದೇ ವೇಳೆ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ಡಾಲಿ ಧನಂಜಯ್ ಅವರು ಅಂತಿಮ ವಿಧಿವಿಧಾನದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಪುನೀತ್ ರಾಜ್ಕುಮಾರ್ ಅವರ ಜೊತೆಯಲ್ಲಿ ಯುವರತ್ನ ಸಿನಿಮಾದಲ್ಲಿ ಕೆಲಸ ಮಾಡಿದ್ದು, ಇಡೀ ಕರ್ನಾಟಕ ಅವರೊಂದಿಗೆ ಸುತ್ತಾಡಿದ್ದು, ಎಲ್ಲವೂ ಜೀವನ ಪೂರ್ತಿ ನೆನಪಿಸಿಕೊಳ್ಳುವಂತಹ ಕ್ಷಣಗಳಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಬೆಳೆದಿದ್ದು, ಬದುಕಿದ್ದು, ವಿದಾಯ ಹೇಳಿದ್ದೂ ಶ್ರೀಮಂತನಾಗಿ: ಕಿಚ್ಚ
ಕೊನೆಯದಾಗಿ ಸಲಗ ಸಿನಿಮಾದ ಪ್ರೀರಿಲೀಸ್ ಇವೆಂಟ್ನಲ್ಲಿ ಅವರನ್ನು ನಾನು ಭೇಟಿಯಾಗಿದ್ದೆ. ಅದನ್ನು ಹೊರತು ಪಡಿಸಿ ರತ್ನನ್ ಪ್ರಪಂಚ ಸಿನಿಮಾ ನೋಡಿ ಕರೆ ಮಾಡಿ ಮಾತನಾಡಿದ್ದರು. ಬಹಳ ದೊಡ್ಡ ವ್ಯಕ್ತಿತ್ವ ಮತ್ತು ಶಿಸ್ತಿನ ವ್ಯಕ್ತಿಯಾಗಿದ್ದರು. ಖಂಡಿತ ಅವರು ನಮ್ಮನ್ನು ಬಿಟ್ಟು ಎಲ್ಲೂ ಹೋಗಿಲ್ಲ. ಅವರು ಬದುಕಿರುವ ರೀತಿ, ಅವರ ನಗು, ಅವರ ಅಪ್ಪುಗೆ, ಅವರು ಹೇಳಿಕೊಟ್ಟು ಹೋದಂತಹ ವಿಚಾರಗಳು ಈ ಎಲ್ಲದರೊಂದಿಗೆ ಅವರು ನಮ್ಮೊಂದಿಗೆ ಇದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಪ್ಪು ಸಾವಿನ ಬೆನ್ನಲ್ಲೇ ಎಚ್ಚೆತ್ತ ಕೇರಳ ಸರ್ಕಾರ
ನನ್ನ ಮೊದಲನೇ ಸಿನಿಮಾ ನೋಡಿದ ನಂತರ ನನಗೆ ವಿಶ್ ಮಾಡಿದ್ದರು. ಯಾವಾಗ ಸಿಕ್ಕಿದರೂ ಕೂಡ ಬಹಳ ಬೆಂಬಲ ನೀಡುತ್ತಿದ್ದರು. ಅವರು ಅಪ್ಪಿಕೊಳ್ಳುವ ರೀತಿಯೇ ನಮಗೆ ಬೇರೆ. ಯಾರು ಎಷ್ಟೇ ದೊಡ್ಡವರಾಗಿರಲಿ, ಯಾರೆಷ್ಟೇ ಚಿಕ್ಕವರಾಗಿರಲಿ ಎಲ್ಲರನ್ನು ಬಹಳ ಪ್ರೀತಿಯಿಂದ ಅಪ್ಪಿಕೊಂಡು ಜೊತೆಗೆ ಕರೆದುಕೊಂಡು ಹೋಗುತ್ತಿದ್ದ ಜೀವ ಅವರದ್ದಾಗಿತ್ತು ಎಂದು ಕಂಬನಿ ಮಿಡಿದಿದ್ದಾರೆ.