ಕರ್ನಾಟಕ (Karnataka) ಸರ್ಕಾರ ಚಲನಚಿತ್ರಗಳಿಗೆ ನೀಡುವ ವಾರ್ಷಿಕ ಪ್ರಶಸ್ತಿಯನ್ನು (State Award) ಬರೋಬ್ಬರಿ ಐದು ವರ್ಷಗಳಿಂದ ಪ್ರದಾನ ಮಾಡಿಲ್ಲ. 2018ರ ಪ್ರಶಸ್ತಿ ಘೋಷಣೆಯಾಗಿದ್ದು, ಅದು ಕೋರ್ಟಿನಲ್ಲಿ ಇರುವುದರಿಂದ ಈವರೆಗೂ ಅದರತ್ತ ಯಾರೂ ಕಣ್ಣು ಕೂಡ ಹಾಯಿಸಿಲ್ಲ. 2019 ರಿಂದ 2022ರವರೆಗೆ ಈವರೆಗೂ ಪ್ರಶಸ್ತಿಗಳ ಆಯ್ಕೆ ಕೂಡ ಆಗಿಲ್ಲ. ಪ್ರಶಸ್ತಿ ಆಯ್ಕೆ ಕಮಿಟಿ ಕೂಡ ಮಾಡಿಲ್ಲ. 2022 ಸಾಲಿನ ಪ್ರಶಸ್ತಿಗಳಿಗೆ ಸಿನಿಮಾಗಳನ್ನು ಆಹ್ವಾನ ಕೂಡ ಮಾಡಿಲ್ಲ. ಇಷ್ಟರ ಮಟ್ಟಿಗೆ ಚಲನಚಿತ್ರ ರಂಗದ ಮೇಲೆ ಸರಕಾರ (Government) ದಿವ್ಯ ನಿರ್ಲಕ್ಷ್ಯ ತೋರಿದೆ.
ಸಬ್ಸಿಡಿ ವಿಚಾರದಲ್ಲೂ ಹಾಗೆಯೇ ಆಗಿದೆ. ಹಲವು ವರ್ಷಗಳಿಂದ ಸಬ್ಸಿಡಿಯನ್ನೇ ನೀಡಿಲ್ಲ. ಸಿನಿಮಾಗಳ (Cinema) ಆಯ್ಕೆಗಾಗಿ ಕಮಿಟಿ ಕೂಡ ರಚನೆ ಮಾಡಿಲ್ಲ. ಮೂರ್ನಾಲ್ಕು ವರ್ಷಗಳಿಂದ ಸಬ್ಸಿಡಿ ಬಾಕಿಯಿದೆ. ಹಾಗಾಗಿ ನಿರ್ಮಾಪಕರು ಸಹಜವಾಗಿಯೇ ಸಂಕಷ್ಟದಲ್ಲಿದ್ದಾರೆ. ಹಿಂದಿನ ಸರಕಾರಕ್ಕೆ ಹಲವು ಬಾರಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಕೂಡ ಆಗಲಿಲ್ಲ ಎನ್ನುವ ಮಾತನ್ನು ಹಲವರು ಆಡುತ್ತಾರೆ. ಇದನ್ನೂ ಓದಿ:ಮೈಸೂರಿಗೆ ಬಂದಿಳಿದ ನಟ ಉಸ್ತಾದ್ ರಾಮ್ ಪೋತಿನೇನಿ
ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕರಾದ ಬಿ.ಎಸ್.ಲಿಂಗದೇವರು, ಗಿರೀಶ್ ಕಾಸರವಳ್ಳಿ, ಪಿ. ಶೇಷಾದ್ರಿ ಸೇರಿದಂತೆ ಹಲವರು ನೇರವಾಗಿ ಸಚಿವರನ್ನು ಭೇಟಿ ಮಾಡಿ ಈ ಎರಡೂ ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದರು. ಜೊತೆಗೆ ಚಿತ್ರನಗರಿ ಕುರಿತು ಪ್ರಸ್ತಾಪ ಮಾಡಿದ್ದರು. ಆದರೂ, ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿಲ್ಲ. ಸಬ್ಸಿಡಿ ಸಿಗಲಿಲ್ಲ. ಮೂರು ವರ್ಷಗಳ ಅವಧಿಯ ಸಿನಿಮಾಗಳನ್ನು ಆಹ್ವಾನಿಸಿದ್ದು ಬಿಟ್ಟರೆ, ಮುಂದಿನ ಹಂತದ ಯಾವ ಕಾರ್ಯಗಳು ನಡೆದಿಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಇದ್ದಾಗಲೇ ಏಪ್ರಿಲ್ 24 ರಂದು ಡಾ.ರಾಜ್ ಕುಮಾರ್ ಅವರ ಜನ್ಮದಿನದಂದು ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜನೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದರು. ಅವರು ಅಧಿಕಾರದಿಂದ ಕೆಳಗಿಳಿದ ನಂತರ ಆ ಕೆಲಸವೂ ಆಗಲೇ ಇಲ್ಲ. ಹೀಗಾಗಿ ಮತ್ತೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. ಅವರ ಸರಕಾರವಾದರೂ ಅದನ್ನು ಮುಂದುವರೆಸಿಕೊಂಡು ಹೋಗುತ್ತಾ ನೋಡಬೇಕಿದೆ.