ಬೆಂಗಳೂರು: ಐಎಎಸ್ ಅಧಿಕಾರಿ ಡಿ.ಕೆ ರವಿ ಸಾವಿನ ಪ್ರಕರಣದಲ್ಲಿ ಕೈಗಾರಿಕಾ ಸಚಿವ ಕೆ.ಜೆ ಜಾರ್ಜ್ ಪಾತ್ರವಿಲ್ಲ. ಈ ಬಗ್ಗೆ ತನಿಖೆ ನಡೆಸಿದ ಸಿಬಿಐ ಕ್ಲೀನ್ಚಿಟ್ ಕೊಟ್ಟಿದೆ ಎಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಇಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸದನದಲ್ಲಿ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆ ವೇಳೆ ಸಚಿವ ಕೆ.ಜೆ ಜಾರ್ಜ್ ಬಗ್ಗೆ ಪ್ರಸ್ತಾಪಿಸಿದ್ದಾರೆ. ನಾನು ಜಾರ್ಜ್ ಅವರನ್ನು ವಹಿಸಿಕೊಳ್ಳುತ್ತಿಲ್ಲ. ವಿರೋಧ ಪಕ್ಷದಲ್ಲಿದ್ದಾಗ ನಾನು ಜಾರ್ಜ್ ಅವರ ರಾಜೀನಾಮೆ ಕೇಳಿದ್ದು ನಿಜ. ಆಗ ನಮ್ಮ ಒತ್ತಡದ ಮೇರೆಗೆ ಅವರು ರಾಜೀನಾಮೆ ನೀಡಿದ್ದರು.
ಕಾನೂನು ಏನಿದೆ ಆ ಬಗ್ಗೆ ತನಿಖೆ ನಡೆಸಿ ಜಾರ್ಜ್ ಅವರಿಗೆ ಸಿಬಿಐ ಕ್ಲೀನ್ ಚಿಟ್ ಕೊಟ್ಟಿದೆ. ಡಿವೈಎಸ್ಪಿ ಎಂ.ಕೆ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲೂ ಜಾರ್ಜ್ ನೇರ ಪಾತ್ರವಿಲ್ಲ ಅಂತ ತಿಳಿದು ಬಂದಿದೆ. ಇದೇ ವೇಳೆ ನಮ್ಮ ಸಮ್ಮಿಶ್ರ ಸರ್ಕಾರ 5 ವರ್ಷ ಪೂರೈಸುತ್ತದೆ. ಈ ಬಗ್ಗೆ ಯಾರಿಗೂ ಭಯ, ಆತಂಕ ಬೇಡ ಎಂದು ಸಿಎಂ ಹೇಳಿದರು.