ಮಂಡ್ಯ: ಮೈತ್ರಿ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಸಿಎಂ ಕುಮಾರಸ್ವಾಮಿ ಅವರು ನಾಳೆಯಿಂದ 2 ದಿನಗಳ ಕಾಲ ಪುತ್ರ ನಿಖಿಲ್ ಪರ ಮಂಡ್ಯದಲ್ಲಿ ಪ್ರಚಾರ ಕಾರ್ಯ ನಡೆಸಲಿದ್ದಾರೆ.
ಮಂಡ್ಯ ಪ್ರಚಾರದಲ್ಲಿ ಭಾಗವಹಿಸುವ ಉದ್ದೇಶದಿಂದ ಇಂದು ರಾತ್ರಿಯೇ ಸಿಎಂ ಕುಮಾರಸ್ವಾಮಿ ಅವರು ಮಂಡ್ಯಕ್ಕೆ ತೆರಳಲಿದ್ದಾರೆ. ನಾಳೆಯಿಂದ ಶ್ರೀರಂಗಪಟ್ಟಣ, ಮದ್ದೂರು, ಮಳವಳ್ಳಿಯಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ. ಉಳಿದಂತೆ ಏಪ್ರಿಲ್ 13 ರಂದು ರಾಹುಲ್ ಗಾಂಧಿ ರಾಜ್ಯದಲ್ಲಿ ಪ್ರಚಾರ ಕೈಗೊಳ್ಳಲಿದ್ದು, ಈ ವೇಳೆ ರಾಹುಲ್ ಅವರಿಗೆ ಸಿಎಂ ಸಾಥ್ ನೀಡಲಿದ್ದಾರೆ.
ಮೈತ್ರಿ ಅಭ್ಯರ್ಥಿಗಳ ಪರ ಒಂದು ದಿನ ಮಾತ್ರ ಪ್ರಚಾರ ಕಾರ್ಯ ನಡೆಸಿದ್ದ ಕುಮಾರಸ್ವಾಮಿ ಅವರು ಪುತ್ರ ನಿಖಿಲ್ ಪರ ಮಾತ್ರ 2 ದಿನಗಳ ಕಾಲ ಪ್ರಚಾರ ಕಾರ್ಯ ನಡೆಸಲಿದ್ದಾರೆ. 2 ದಿನಗಳ ಹೊರತಾಗಿಯೂ ಬೇರೆ ಬೇರೆ ದಿನಗಳಲ್ಲೂ ಕೂಡ ಮಂಡ್ಯದಲ್ಲಿ ಸಿಎಂ ಪ್ರಚಾರ ಕೈಗೊಳ್ಳಲಿದ್ದಾರೆ. ಇತ್ತ ನಿಖಿಲ್ ಪ್ರತಿಸ್ಪರ್ಧಿ ಸುಮಲತಾ ಪರ ನಟರಾದ ಯಶ್, ದರ್ಶನ್ ಅವರು ಭರ್ಜರಿ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ.
ಮಂಡ್ಯ ರಾಜಕೀಯದಲ್ಲಿ ಈಗಾಗಲೇ ಆರೋಪ ಪ್ರತ್ಯಾರೋಪಗಳು ಹೆಚ್ಚಾಗಿದ್ದು, ವೈಯಕ್ತಿಕ ಮಟ್ಟದಲ್ಲಿ ಆರೋಪಗಳನ್ನು ಮಾಡಲಾಗುತ್ತಿದೆ. ಸಿಎಂ ತಮ್ಮ ಪ್ರಚಾರ ವೇಳೆ ಏನೆಲ್ಲಾ ವಿಚಾರಗಳನ್ನು ಪ್ರಸ್ತಾಪ ಮಾಡಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ. ಈ ಹಿಂದೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ವೇಳೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ವಿರುದ್ಧ ವಾಗ್ದಾಳಿ ನಡೆಸಿದ್ದರು.