– ಮತದಾರರನ್ನು ಸೆಳೆಯಲು ಕೊನೆ ಕಸರತ್ತು
ಕಲಬುರಗಿ, ಧಾರವಾಡ: ಚಿಂಚೋಳಿ ಹಾಗೂ ಕುಂದಗೋಳ ಉಪಚುನಾವಣೆಯ ಬಹಿರಂಗ ಪ್ರಚಾರ ಇಂದು ಕೊನೆಯ ದಿನ ಹಿನ್ನೆಲೆಯಲ್ಲಿ ಎರಡೂ ಕ್ಷೇತ್ರಗಳಲ್ಲೂ ಪಕ್ಷದ ನಾಯಕರು ಅಬ್ಬರಿಸಲಿದ್ದಾರೆ.
ಚಿಂಚೋಳಿಯಲ್ಲಿ ಇಂದು ಸಂಜೆ 6 ಗಂಟೆಗೆ ಬಿಜೆಪಿ ಬಹಿರಂಗ ಸಮಾವೇಶ ನಡೆಸಲಿದೆ. ಶಾಸಕ ವಿ ಸೋಮಣ್ಣ, ಅರವಿಂದ ಲಿಂಬಾವಳಿ, ಮಾಲೀಕಯ್ಯ ಗುತ್ತೆದಾರ್ ನೇತೃತ್ವದಲ್ಲಿ ನಗರದಲ್ಲಿ ಅಬ್ಬರದ ಸಮಾವೇಶ ನಡೆಯಲಿದೆ.
ಅತ್ತ ಕಾಂಗ್ರೆಸ್ನಿಂದ ಅಂತಿಮ ದಿನದ ಕಣದಲ್ಲಿ ಘಟಾನುಘಟಿ ನಾಯಕರೇ ಭಾಗಿಯಾಗಲಿದ್ದಾರೆ. ಡಿಸಿಎಂ ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ, ವೇಣುಗೋಪಾಲ್ ನೇತೃತ್ವದಲ್ಲಿ ಸವಿತಾ ಸಮಾಜದ ಮುಖಂಡರ ಮತ್ತು ಸಮಾಜದ ಮಠಾಧೀಶರ ಸಭೆ ನಡೆಯಲಿದೆ. ಮಧ್ಯಾಹ್ನ ಚಿಂಚೋಳಿಯ ಪ್ರಮುಖ ಏರಿಯಾಗಳಲ್ಲಿ ಪ್ರಿಯಾಂಕ್ ಖರ್ಗೆ ರೋಡ್ ಶೋ ನಡೆಸಲಿದ್ದಾರೆ.
ಕುಂದಗೋಳ ಉಪಚುನಾವಣೆಗೂ ಇಂದು ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಮೈತ್ರಿ ಅಭ್ಯರ್ಥಿ ಕುಸುಮಾ ಶಿವಳ್ಳಿ ಪರ ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಸೇರಿದಂತೆ ಹಲವಾರು ನಾಯಕರು ಮತಯಾಚನೆ ಮಾಡಲಿದ್ದಾರೆ. ಬಿಜೆಪಿ ಅಭ್ಯರ್ಥಿ ಎಸ್.ಐ.ಚಿಕ್ಕನಗೌಡ್ರು ಪರ ಕಮಲ ನಾಯಕರು ಮತಯಾಚನೆ ಮಾಡಲಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಂಸದ ಪ್ರಲ್ಹಾದ್ ಜೋಶಿ ಕ್ಯಾಂಪೇನ್ ಮಾಡಲಿದ್ದಾರೆ.