ಹಾಸನ: ನಿತ್ಯಕರ್ಮಕ್ಕೆ ಎದ್ದಾಗ ನಿಯಂತ್ರಣ ತಪ್ಪಿ ಕಾಲು ಜಾರಿ ಬಿದ್ದು ಶ್ರವಣಬೆಳಗೊಳ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ (Charukeerthi Bhattaraka Swamiji) ಮೃತಪಟ್ಟಿದ್ದಾರೆ ಎಂದು ಡಿಸಿ ಎಂ.ಎಸ್.ಅರ್ಚನಾ (M.S.Archana) ಮಾಹಿತಿ ನೀಡಿದ್ದಾರೆ.
ಕಾಲು ನೋವಿನಿಂದ ಬಳಲುತ್ತಿದ್ದ ಶ್ರೀಗಳು ಬೆಳಗ್ಗೆ ನಿತ್ಯಕರ್ಮಕ್ಕೆ ಎದ್ದಾಗ ನಿಯಂತ್ರಣ ತಪ್ಪಿ ಕಾಲು ಜಾರಿ ಬಿದ್ದು, ತಲೆಗೆ ಗಂಭೀರ ಪೆಟ್ಟು ಬಿದ್ದಿತ್ತು. ತೀವ್ರ ಗಾಯಗಳಿಂದ ಬಳಲಿದ್ದ ಶ್ರೀಗಳನ್ನು ಮಠದ ಸಿಬ್ಬಂದಿಗಳು ಆಸ್ಪತ್ರೆಗೆ ಸಾಗಿಸಿದ್ದರು. ತಲೆಗೆ ಗಂಭೀರವಾಗಿ ಗಾಯವಾಗಿದ್ದರಿಂದ ಚಿಕಿತ್ಸೆ ಫಲಿಸದೆ ಶ್ರೀಗಳು ಮೃತಪಟ್ಟಿದ್ದಾರೆ. ಶ್ರವಣಬೆಳಗೊಳದ (Shravanabelagola) ಚಂದ್ರಗಿರಿ ಬೆಟ್ಟದ (Chandragiri Betta) ತಪ್ಪಲಿನಲ್ಲಿ ಸಂಜೆ ಆರು ಗಂಟೆಯೊಳಗಾಗಿ ಶ್ರೀಗಳ ಅಂತ್ಯಸಂಸ್ಕಾರ (Funeral) ನೆರವೇರಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಯುವತಿಗೆ ಬಣ್ಣ ಹಚ್ಚಿದ್ದಕ್ಕೆ ಕಾನೂನು ವಿದ್ಯಾರ್ಥಿ ಕಿಡ್ನಾಪ್ಗೈದು ಥಳಿತ – ಆರೋಪಿಗಳ ಬಂಧನ
1949 ಮೇ 3 ರಂದು ರತ್ನವರ್ಮರಾಗಿ ಕಾರ್ಕಳದ (Karkala) ವರಂಗ ಗ್ರಾಮದಲ್ಲಿ ಜನಿಸಿದ್ದ ಸ್ವಾಮೀಜಿಯವರಿಗೆ 74 ವರ್ಷವಾಗಿತ್ತು. ಸಂಸ್ಕೃತ, ಪ್ರಾಕೃತ, ಕನ್ನಡದಲ್ಲಿ ಪಾಂಡಿತ್ಯ ಹೊಂದಿದ್ದ ಇವರು ಜೈನ ತತ್ವಶಾಸ್ತ್ರದಲ್ಲಿ ಪಾಂಡಿತ್ಯ ಹೊಂದಿದ್ದರು. ಅಲ್ಲದೇ ಮೈಸೂರು ವಿಶ್ವವಿದ್ಯಾಲಯದಿಂದ (Mysuru University) ಇತಿಹಾಸದಲ್ಲಿ ಎಂಎ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದಿಂದ (Bengaluru University) ತತ್ವಶಾಸ್ತ್ರದಲ್ಲಿ ಎಂಎ ಪದವಿ ಪಡೆದಿದ್ದರು. 1969 ಡಿ.12 ರಂದು ಸ್ವಾಮೀಜಿಗಳಾದರು. ಇದನ್ನೂ ಓದಿ: ಶ್ರವಣಬೆಳಗೊಳ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಜಿನೈಕ್ಯ
1970 ರಲ್ಲಿ ಶ್ರವಣಬೆಳಗೊಳದ ಮಠದ ಪೀಠಾಧಿಪತಿಗಳಾದರು. ಹೊಯ್ಸಳ ವಂಶದಿಂದ ನೀಡಿದ ಚಾರುಕೀರ್ತಿ ಸ್ವಾಮೀಜಿ ಎಂಬ ಪಟ್ಟವನ್ನು ಇವರಿಗೂ ನೀಡಲಾಯಿತು. ಜೈನರ ಪ್ರಸಿದ್ಧ ಪುಣ್ಯ ಕ್ಷೇತ್ರವಾದ ಶ್ರವಣಬೆಳಗೊಳದಲ್ಲಿ 12 ವರ್ಷಕ್ಕೊಮ್ಮೆ ನಡೆಯುವ ಮಹಾಮಸ್ತಾಭಿಷೇಕವು ಇವರ ಸಮ್ಮುಖದಲ್ಲಿ ಯಶಸ್ವಿಯಾಗಿ ನಡೆದಿದೆ. 1981,1993, 2006 ಹಾಗೂ 2018 ರ ಮಹಾಮಸ್ತಾಭಿಷೇಕವನ್ನು ಯಶಸ್ವಿಯಾಗಿ ನೆರವೇರಿಸಿದ ಕೀರ್ತಿ ಸ್ವಸ್ತಿಶ್ರೀ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರಿಗೆ ಸಲ್ಲುತ್ತದೆ. ಇದನ್ನೂ ಓದಿ: ಪಂಚಮಸಾಲಿ ಮೀಸಲಾತಿಗಿಲ್ಲ ಅಡ್ಡಿ – ಮಧ್ಯಂತರ ಆದೇಶ ತೆರವುಗೊಳಿಸಿದ ಹೈಕೋರ್ಟ್