– ರೋಹಿಣಿ ಸಿಂಧೂರಿಯವರ ಗಮನಕ್ಕೆ ತಂದಿದ್ದೇನೆ
– ಸರ್ಕಾರದ ನಿರ್ದೇಶನದ ಬಳಿಕ ನಿರ್ಧಾರ ಕೈಗೊಳ್ಳುತ್ತೇವೆ
ಹಾಸನ: ಈ ಬಾರಿ ಧರ್ಮ ವಿವಾದದ ಹಿನ್ನೆಲೆಯಲ್ಲಿ ಬೇಲೂರು ಚನ್ನಕೇಶವ ಸ್ವಾಮಿ ಜಾತ್ರಾ ಮಹೋತ್ಸವದ ಗಳಿಗೆ ತೇರಿನ ದಿನ ಕುರಾನ್ ಪಠಣೆ ಮಾಡುವ ವಿಚಾರವನ್ನು ಆಯುಕ್ತರಾದ ರೋಹಿಣಿ ಸಿಂಧೂರಿ ಅವರ ಗಮನಕ್ಕೆ ತರಲಾಗಿದೆ ಎಂದು ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ವಿದ್ಯುಲ್ಲತಾ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಳಿಗೆ ತೇರಿನ ದಿನ ಕುರಾನ್ ಪಠಣೆ ಮಾಡುವ ವಿಚಾರ ನಮ್ಮ ಕೈಪಿಡಿಯಲ್ಲೇ ಇದೆ. ಗಳಿಗೆ ತೇರಿನ ದಿನ ದೇವಾಲಯದ ಬಳಿ ನಿಂತು ಕುರಾನ್ ಪಠಣೆ ಮಾಡಲಾಗುತ್ತೆ. ಪ್ರತಿವರ್ಷವೂ ಅದು ನಡೆದುಕೊಂಡು ಬಂದಿದೆ. ಆದರೆ ಈ ವರ್ಷ ಸ್ವಲ್ಪ ಚರ್ಚೆಗಳಾಗುತ್ತಿದೆ. ಹೀಗಾಗಿ ಗಳಿಗೆ ತೇರಿನ ದಿನ (ಚಿಕ್ಕತೇರು) ಕುರಾನ್ ಪಠಣೆ ನಡೆಯುವುದರ ಬಗ್ಗೆ ಆಯುಕ್ತರಾದ ರೋಹಿಣಿ ಸಿಂಧೂರಿಯವರ ಗಮನಕ್ಕೆ ತಂದಿದ್ದೇನೆ. ಅವರ ನಿರ್ದೇಶನದ ನಿರೀಕ್ಷೆಯಲ್ಲಿದ್ದೇವೆ. ಅವರ ನಿರ್ದೇಶನದಂತೆ ನಾವು ನಡೆಯಲಿದ್ದೇವೆ ಎಂದರು.
ರಥದ ಪಕ್ಕ ನಿಂತು ಕುರಾನ್ ಪಠಣ ಮಾಡಬೇಕು. ಇದು ಮೊದಲಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ಇದೊಂದು ಪ್ರತೀತಿಯಿದೆ. 32 ಪುಟಗಳಿರುವ ಕೈಪಿಡಿಯಲ್ಲಿ ಇದು ಉಲ್ಲೇಖವಾಗಿದೆ. ಇಂದು ಈ ಬಗ್ಗೆ ನಿರ್ದೇಶನ ಬರುವ ನಿರೀಕ್ಷೆಯಿದ್ದು, ನಿರ್ದೇಶನ ಬಂದ ನಂತರ ಅದರಂತೆ ನಡೆಯುತ್ತೇವೆ ಎಂದು ಮಾಹಿತಿ ನೀಡಿದರು.
ಜಾತ್ರಾ ಮಹೋತ್ಸವದ ಅಂಗವಾಗಿ ದೇವಾಲಯದ ಬಳಿ ನೂರಕ್ಕು ಹೆಚ್ಚು ಮಳಿಗೆ ಹಾಕಲಾಗಿದೆ. ಸುಮಾರು 15 ಜನ ಮುಸ್ಲಿಮರೂ ಕೂಡ ಮಳಿಗೆಗಳಲ್ಲಿ ಅಂಗಡಿ ಹಾಕಿದ್ದಾರೆ. ಜಾತ್ರಾಮಹೋತ್ಸವದ ಸಂದರ್ಭದಲ್ಲಿ ಮುಸ್ಲಿಂಮರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂಬ ಚರ್ಚೆ ಕೇಳಿಬಂದಿತ್ತು. ಈ ಬಗ್ಗೆ ಹಿಂದೂಪರ ಸಂಘಟನೆಯವರು ಜಿಲ್ಲಾಧಿಕಾರಿ, ತಹಶಿಲ್ದಾರ್, ದೇವಾಲಯದ ಸಿಇಓಗೆ ಮನವಿ ಸಲ್ಲಿಸಿದ್ದರು ಎಂದು ಹೇಳಿದರು. ಇದನ್ನೂ ಓದಿ: ತಿರುಪತಿ ದೇಗುಲದಲ್ಲಿ ಕಾಲ್ತುಳಿತ – ವೆಂಕಟೇಶ್ವರನ ದರ್ಶನಕ್ಕೆ ಭಕ್ತಾದಿಗಳ ನೂಕುನುಗ್ಗಲು
ಜಾತ್ರೋತ್ಸವದ ಸಂದರ್ಭದಲ್ಲಿ ಮಳಿಗೆ ಹಾಕುವ ವಿಚಾರವಾಗಿ ಸಿದ್ದೇಶ್ ಎಂಬವರು ಟೆಂಡರ್ ಪಡೆದಿದ್ದಾರೆ. ಟೆಂಡರ್ ಪುರಸಭೆ ವ್ಯಾಪ್ತಿಗೆ ಸೇರಿದ್ದು, ದೇವಾಲಯದ ಆಡಳಿತ ಮಂಡಳಿಗೂ ಇದಕ್ಕೂ ಸಂಬಂಧವಿಲ್ಲ. ಈ ಬಾರಿ ಜಾತ್ರಾಮಹೋತ್ಸವದ ಹಿನ್ನೆಲೆಯಲ್ಲಿ ಸುಮಾರು ನೂರು ಮಳಿಗೆಗಳಲ್ಲಿ ಅಂಗಡಿ ಇಡಲಾಗಿದ್ದು, ಅದರಲ್ಲಿ 15 ಮುಸ್ಲಿಂ ಕುಟುಂಬಗಳೂ ಕೂಡ ಸೇರಿವೆ ಎಂದು ಟೆಂಡರ್ ದಾರರು ತಿಳಿಸಿದ್ದಾರೆ. ಇದನ್ನೂ ಓದಿ: ರಾಮನವಮಿಯಂದು ಮಾಂಸಾಹಾರ ಪೂರೈಸಿದ್ದಕ್ಕೆ ವಿದ್ಯಾರ್ಥಿಗಳ ಗಲಾಟೆ: JNUನಿಂದ ವರದಿ ಕೇಳಿದ ಕೇಂದ್ರ
ದೇವಾಲಯದಲ್ಲಿ ಈಗಾಗಲೇ ಪಾಂಚರಾತ್ರಾ ನಿಮಿತ್ತ ಧಾರ್ಮಿಕ ವಿಧಿ ವಿಧಾನ ನಡೆಯುತ್ತಿವೆ. ನಾಳೆ ಬೆಳಗ್ಗೆ ನಡೆಯಲಿರುವ ಗಳಿಗೆ ತೇರು (ಚಿಕ್ಕತೇರು) ರಥೋತ್ಸವ ನಡೆಯುತ್ತದೆ. ನಾಳೆ ದೇವರಿಗೆ ಸಂಪೂರ್ಣ ಅಲಂಕಾರ, ಮಹಾಮಂಗಳಾರತಿ ನಡೆಯಲಿದೆ.