ನವದೆಹಲಿ: ಸದನದ ಕಲಾಪಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಅಮಾನತುಗೊಂಡಿದ್ದ ಡಿಎಂಕೆ ಸಂಸದ ಎಸ್.ಆರ್.ಪಾರ್ಥಿಬನ್ (SR Parthiban) ಅವರ ಅಮಾನತು ಆದೇಶವನ್ನು ಹಿಂಪಡೆಯಲಾಗಿದೆ.
ಸಂಸತ್ನಲ್ಲಿ ಸದನದ ಕಲಾಪಕ್ಕೆ ಅಡ್ಡಿಪಡಿಸಿದ ಕಾರಣಕ್ಕಾಗಿ ಡಿಎಂಕೆ (DMK) ಸಂಸದ ಎಸ್.ಆರ್.ಪಾರ್ಥಿಬನ್ ಅವರನ್ನು ಗುರುವಾರ ಲೋಕಸಭೆಯಿಂದ ಅಮಾನತುಗೊಳಿಸಲಾಗಿತ್ತು. ಒಟ್ಟು 14 ಮಂದಿ ಸಂಸದರು ಅಮಾನತುಗೊಂಡಿದ್ದರು. ಆದರೆ ಪಾರ್ಥಿಬನ್ ಅವರು ಇಂದು ಸದನಕ್ಕೆ ಗೈರಾಗಿದ್ದರು. ಗದ್ದಲ ಉಂಟಾದಾಗ ಅವರು ದೆಹಲಿಯಲ್ಲೂ ಇರಲಿಲ್ಲ ಎಂಬುದು ತಿಳಿದುಬಂದಿದೆ. ಇದನ್ನೂ ಓದಿ: ಅಶಿಸ್ತಿನ ವರ್ತನೆ – ಲೋಕಸಭೆಯ 14 ಸಂಸದರು ಸಸ್ಪೆಂಡ್
ಕೆಲವು ಗಂಟೆಗಳ ನಂತರ ಅವರ ಹೆಸರನ್ನು ತಪ್ಪಾಗಿ ಸೇರಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಗೊಂದಲವನ್ನು ನಿವಾರಿಸಲಾಗಿದೆ. ಅಲ್ಲದೇ ಅವರ ಅಮಾನತು ಆದೇಶವನ್ನು ಹಿಂತೆಗೆದುಕೊಳ್ಳಲಾಗಿದೆ.
ಈ ಕುರಿತು ಸ್ಪಷ್ಟಪಡಿಸಿರುವ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಡಿಎಂಕೆ ಸಂಸದರ ಹೆಸರು ತಪ್ಪಾಗಿ ಸೇರ್ಪಡೆಗೊಂಡಿದೆ. ಅಮಾನತುಗೊಂಡ ಸಂಸದರ ಪಟ್ಟಿಯಿಂದ ಅವರ ಹೆಸರನ್ನು ಹಿಂಪಡೆಯಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಸಂಸತ್ನಲ್ಲಿ ಸ್ಮೋಕ್ ಬಾಂಬ್- ಆರೋಪಿಗಳ ಮೇಲೆ ಯುಎಪಿಎ ಅಡಿ ಕೇಸ್ ದಾಖಲು
ತಪ್ಪಾದ ಗುರುತಿಸಿರುವ ಪ್ರಕರಣವಾಗಿರುವುದರಿಂದ ಸದಸ್ಯರ ಹೆಸರನ್ನು ಕೈಬಿಡುವಂತೆ ನಾನು ಸ್ಪೀಕರ್ಗೆ ಮನವಿ ಮಾಡಿದ್ದೇನೆ. ಸಲಹೆಗೆ ಸ್ಪೀಕರ್ ಒಪ್ಪಿಗೆ ನೀಡಿದ್ದಾರೆ ಎಂದು ಜೋಶಿ ತಿಳಿಸಿದ್ದಾರೆ.