ಚಿಕ್ಕಮಗಳೂರು: ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಗೋ ಬ್ಯಾಕ್ ಶೋಭಕ್ಕ ಎಂದು ಪತ್ರ ಸಮರ ಆರಂಭವಾಗಿದ್ದು, ಇದೆಲ್ಲಾ ವಿರೋಧಿಗಳ ಸ್ಪಾನ್ಸರ್ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ತಿರುಗೇಟು ಕೊಟ್ಟಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಟಿಕೆಟ್ ಎಲ್ಲರೂ ಕೇಳಬಹುದು. ಆದರೆ ಮತ್ತೊಬ್ಬರ ತೇಜೋವಧೆ, ಅವಮಾನ ಮಾಡಿ ಕೇಳಬಾರದು. ಈ ಅಪಪ್ರಚಾರವನ್ನ ಜನ, ಹೈಕಮಾಂಡ್ ಗಮನಿಸುತ್ತಿದೆ. ನಿಜವಾದ ಬಿಜೆಪಿ (BJP) ಕಾರ್ಯಕರ್ತರು ಈ ಕೆಲಸ ಮಾಡಲ್ಲ. ಅಧಿಕಾರಕ್ಕಾಗಿ ಬಂದು ಹೋಗುವವರು ಮಾಡುತ್ತಾರೆ, ಅವರ ಪಾರ್ಟಿಯಲ್ಲೂ ಅದನ್ನೇ ಮಾಡಿರುತ್ತಾರೆ. ಒಬ್ಬೊಬ್ಬರ ಕೈಯಲ್ಲಿ 10-20-25 ಕಾರ್ಡ್ ಗಳಿವೆ. ಯಾರೋ ಸ್ಪಾನ್ಸರ್ ಮಾಡಿ ಇದನ್ನ ಮಾಡಿಸುತ್ತಿದ್ದಾರೆ ಅನ್ನೋದು ಸ್ಪಷ್ಟ ಎಂದರು. ಇದನ್ನೂ ಓದಿ: ನಾನು ರಾಜಕಾರಣಿಯಾಗಿ ಹುಟ್ಟಿಲ್ಲ, ರಾಜಕಾರಣಿಯಾಗಿ ಸಾಯಲ್ಲ: ಅನಂತ್ ಕುಮಾರ್ ಹೆಗಡೆ
ರಾಜಕೀಯದಲ್ಲಿ ನನಗೆ ವಿರೋಧಿಗಳು ಹೊಸದಲ್ಲ: ಸ್ವಪಕ್ಷ-ವಿಪಕ್ಷ ಯಾರೇ ಆಗಲಿ, ಅಭಿವೃದ್ಧಿ ಆಧಾರದಲ್ಲಿ ಚರ್ಚೆಯಾಗಲಿ. ಮುಂದಿನ ದಿನಗಳಲ್ಲಿ ಅದಕ್ಕೆ ಉತ್ತರ ಯಾರು ಕೊಡಬೇಕೋ ಅವರೇ ಕೊಡುತ್ತಾರೆ. ಆದರೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಅಭಿವೃದ್ಧಿ ಆಧಾರದಲ್ಲೇ ಚರ್ಚೆ ಆಗಬೇಕು. ನಾವು ಮಾಡಿರುವ ಅಭಿವೃದ್ಧಿ ಆಧಾರದ ಮೇಲೆ ಚರ್ಚೆ ಆಗಬೇಕು. ನನಗೆ ರಾಜಕೀಯದಲ್ಲಿ ವಿರೋಧಗಳು ಹೊಸದಲ್ಲ. ನಾನು ಮಂತ್ರಿ ಇದ್ದಾಗಲೇ ರಾಜೀನಾಮೆ ತೆಗೆದುಕೊಂಡಿದ್ದೆ. ಟಿಕೆಟ್ ಕೇಳೋರು ಸಮಾಜಿಕ ಜಾಲತಾಣದಲ್ಲಿ ಬರೆಯುತ್ತಾರೆ, ನಿಮಗೂ ಕೊಡುತ್ತಾರೆ. ನಾವು ಅಭಿವೃದ್ಧಿ ಆಧಾರದಲ್ಲಿ ಚುನಾವಣೆ ಮಾಡ್ತೀವಿ, ಎದುರಾಳಿಯ ನಿಂದನೆಯಿಂದಲ್ಲ. ಕ್ಷೇತ್ರ 10 ವರ್ಷದ ಹಿಂದೆ ಹೇಗಿತ್ತು ಅನ್ನೋದನ್ನ ಚರ್ಚೆ ಮಾಡಬೇಕು ಎಂದು ಹೇಳಿದರು.
ರಾಜ್ಯ ಸರ್ಕಾರದ ಬಗ್ಗೆ ಭವಿಷ್ಯ: ಲೋಕಸಭಾ ಚುನಾವಣೆಯ (Loksabha Election) ನಂತರ ರಾಜ್ಯದಲ್ಲಿ ಅಲ್ಲೋಲ-ಕಲ್ಲೋಲವಾಗಲಿದೆ. ಲೋಕ ಚುನಾವಣೆ ಬಳಿಕ ರಾಜ್ಯದಲ್ಲಿ ಏನು ಬೇಕಾದರೂ ಆಗಬಹುದು. ರಾಜ್ಯದಲ್ಲಿ ಅಷ್ಟೊಂದು ಗೊಂದಲದ ವಾತಾವರಣವಿದೆ, ಅದನ್ನು ಊಹೆ ಕೂಡ ಮಾಡಲಾಗದು. ಕಾಂಗ್ರೆಸ್ಸಿಗರಲ್ಲಿ ಸಾಕಷ್ಟು ಗೊಂದಲದ ವಾತಾವರಣವಿದೆ, ಅದು ಸರ್ಕಾರದ ಮೇಲೆ ಪರಿಣಾಮ ಬೀರಲಿದೆ. ಯಾವಾಗ ಬೇಕಾದರೂ ಸರ್ಕಾರ ಏನು ಬೇಕಾದರೂ ಆಗುವಂತಹಾ ವಾತಾವರಣವಿದೆ. ಅಂತ ವಾತಾವರಣ ನಮ್ಮಲ್ಲಿಲ್ಲ, ಕಾಂಗ್ರೆಸ್ ನಲ್ಲಿ ಅಂತ ವಾತಾವರಣ ನಿರ್ಮಾಣವಾಗಿದೆ ಎಂದು ಇದೇ ವೇಳೆ ಶೋಭಾ ಕರಂದ್ಲಾಜೆ ಅವರು ರಾಜ್ಯ ಸರ್ಕಾರದ ಬಗ್ಗೆ ಭವಿಷ್ಯ ನುಡಿದರು.