ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದಿಂದ ಸಿಮೆಂಟ್ ಇಟ್ಟಿಗೆ ಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿ, ಮತ್ತೊಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಆರ್.ಕೆ ಹೆಗ್ಡೆ ನಗರದಲ್ಲಿ ನಡೆದಿದೆ.
ಮಲ್ಲಮ್ಮ (30) ಮೃತ ಮಹಿಳೆಯಾಗಿದ್ದು, ಕಟ್ಟಡ ನಿರ್ಮಾಣ ಕಾರ್ಯಕ್ಕಾಗಿ ಇಟ್ಟಿಗೆಗಳನ್ನ ಮೂರನೇ ಮಹಡಿಗೆ ಸಾಗಿಸುವಾಗ ಅವಘಡ ಸಂಭವಿಸಿದೆ. ಮಹಡಿ ಕೆಳಗಿದ್ದ ಮಹಿಳೆಯ ತಲೆ ಮೇಲೆ ಇಟ್ಟಿಗೆಗಳು ಬಿದ್ದ ಪರಿಣಾಮ ಅಧಿಕ ರಕ್ತಸ್ರಾವ ಆಗಿದೆ. ಕೂಡಲೇ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ನಡೆಸಿದರು ದಾರಿ ಮಧ್ಯೆದಲ್ಲಿಯೇ ಮಹಿಳೆ ಸಾವನ್ನಪ್ಪಿದ್ದಾರೆ.
ಘಟನೆಯಲ್ಲಿ ಮಲ್ಲೇಶ್ ಎಂಬವರು ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಅಂದಹಾಗೇ ಮೃತ ಮಲ್ಲಮ್ಮ ರಾಯಚೂರು ಜಿಲ್ಲೆಯ ಸಗಮಕುಂಟ ಗ್ರಾಮದ ನಿವಾಸಿಯಾಗಿದ್ದು, ಜಿಲ್ಲೆಯಲ್ಲಿ ಬರಗಾಲ ಆವರಿಸಿರುವ ಹಿನ್ನಲೆ ಬೆಂಗಳೂರಿಗೆ ದುಡಿಯಲು ಕುಟುಂಬ ಸಮೇತ ನಗರಕ್ಕೆ ವಲಸೆ ಬಂದಿದ್ದರು. ಘಟನೆಗೆ ಕಟ್ಟಡ ಮಾಲೀಕರ ನಿರ್ಲಕ್ಷ್ಯವೇ ಕಾರಣ ಎಂದು ಸಂಬಂಧಿಕರು ಆರೋಪ ಮಾಡಿದ್ದಾರೆ.