ಮೈಸೂರು: ಜಿಲ್ಲೆಯ ಅಂಬಾವಿಲಾಸ ಅರಮನೆಯಲ್ಲಿ ಇಂದು ಆಯುಧ ಪೂಜೆ ಸಂಭ್ರಮದಿಂದ ತುಂಬಿ ತುಳುಕುತ್ತಿದೆ.
ಜಯ ಮಾರ್ತಾಂಡ ದ್ವಾರದ ಬಳಿ ಇರುವ ಕೋಡಿಸೋಮೇಶ್ವರ ದೇವಸ್ಥಾನದಲ್ಲಿ ಆಯುಧಗಳಿಗೆ ಪೂಜೆ ಮಾಡಲಾಗಿದೆ. ಸಿಬ್ಬಂದಿ ಅರಮನೆಯಿಂದ ದೇವಸ್ಥಾನದವರೆಗೆ ಪಟ್ಟದ ಆನೆ, ಕುದುರೆ ಒಂಟೆಗಳ ಜೊತೆ ಕೊಂಡೊಯ್ಯಲಾಗಿತ್ತು. ಪೂಜೆ ಬಳಿಕ ಅರಮನೆಯ ಕೊಠಡಿಯಲ್ಲಿ ಚಂಡಿಕಾ ಹೋಮ ನೆರವೇರಿತು.
ಅರಮನೆಯ ವಾಹನಗಳು ಆಯುಧ ಪೂಜೆಗೆ ಸಿದ್ಧವಾಗಿದ್ದು, ಅರಮನೆ ಸಿಬ್ಬಂದಿ ವಾಹನಗಳನ್ನ ಬಾಳೆ ಹೂವಿನಿಂದ ರಾಜಮನೆತನದ ಎಲ್ಲ ಕಾರುಗಳನ್ನು ಸಿಂಗರಿಸಿದ್ದಾರೆ. ನವರಾತ್ರಿ ಉತ್ಸವಕ್ಕೆ ಇಂದು ತೆರೆಯಾಗುತ್ತಿದ್ದು, ರಾಜವಂಶಸ್ಥರ ಖಾಸಗಿ ದರ್ಬಾರ್ ಸಂಜೆ ಸಮಾಪ್ತಿಯಾಗಲಿದೆ. ಮೈಸೂರು ಅರಮನೆಯಲ್ಲಿಂದು ಸಾಂಪ್ರದಾಯಿಕ ಆಯುಧ ಪೂಜೆ ಆಚರಣೆ ಜರುಗುತ್ತಿದ್ದು, ಇಂದು ಮುಂಜಾನೆ ಚಂಡಿಕಾ ಹೋಮದ ಕೊಠಡಿಯಲ್ಲಿ ಚಂಡಿಕಾ ಹೋಮ ಆರಂಭವಾಗಿದೆ. ಬೆಳಗ್ಗೆ 7 ಗಂಟೆಗೆ ಆನೆ ಬಾಗಿಲಿಗೆ ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಕುದುರೆ ಆಗಮಿಸಿವೆ. ನಂತರ ಆಯುಧಗಳನ್ನು ಅರಮನೆಯ ಜಯ ಮಾರ್ತಾಂಡ ದ್ವಾರದ ಮಾರ್ಗವಾಗಿ ಕೋಡಿ ಸೋಮೇಶ್ವರ ದೇವಾಲಯಕ್ಕೆ ಕಳುಹಿಸಿ ಪೂಜೆ ಮಾಡಲಾಗಿದೆ. ಇದರೊಂದಿಗೆ ಪಟ್ಟದ ಆನೆ, ಕುದುರೆ, ಹಸು ಕೂಡ ಹೆಜ್ಜೆ ಹಾಕಿದ್ದವು.
ಬೆಳಗ್ಗೆ 8.15 ರಿಂದ 8.30ಕ್ಕೆ ಕೋಡಿ ಸೋಮೇಶ್ವರ ದೇವಾಲಯದಿಂದ ಅರಮನೆಯ ಕಲ್ಯಾಣ ಮಂಟಪಕ್ಕೆ ಆಯುಧಗಳನ್ನು ತರಲಾಗಿದ್ದು, ಬೆ. 9 ಕ್ಕೆ ಚಂಡಿಕಾ ಹೋಮದ ಕೊಠಡಿಯಲ್ಲಿ ಚಂಡಿಕಾ ಹೋಮ ಪೂರ್ಣಾಹುತಿಯಾಗಲಿದೆ. ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಂದ ಬೆ.10 ರಿಂದ 10.25ದ ವರೆಗೆ ಕಲ್ಯಾಣ ಮಂಟಪದಲ್ಲಿ ಆಯುಧ ಪೂಜೆ ಕೈಗೊಂಡಿದ್ದು, ಕತ್ತಿ, ಖಡ್ಗ, ಗುರಾಣಿ, ಯುದ್ಧೋಪಕರಣ, ವಾಹನ ಸೇರಿದಂತೆ ಅರಮನೆಯ ಆಯುಧಗಳಿಗೆ ಪೂಜೆ ಮಾಡಲಿದ್ದಾರೆ.
ಸಂಜೆ ಅಂಬಾವಿಲಾಸ ದರ್ಬಾರ್ ಹಾಲ್ನಲ್ಲಿ ಸಿಂಹಾಸನ ವಿಸರ್ಜನೆ ಮಾಡಲಿದ್ದು, ವಾಣಿ ವಿಲಾಸ ದೇವರ ಮನೆಯಲ್ಲಿ ಕಂಕಣ ವಿಸರ್ಜನೆ ಮಾಡಲಾಗುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv