ಬೆಂಗಳೂರು: ಮೇ 3 ಬಿಜೆಪಿಗೆ ಬಿಗ್ ಡೇ ಆಗಲಿದೆ. ಸಂಪುಟ ಪುನಾರಚನೆಯ ಮಾತುಕತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನೆಯಲ್ಲೇ ನಡೆಯಲಿದೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಬಸವರಾಜ ಬೊಮ್ಮಾಯಿ ಅವರು ಊಟದ ವ್ಯವಸ್ಥೆ ಏರ್ಪಾಡು ಮಾಡಿದ್ದಾರೆ. ಮಧ್ಯಾಹ್ನ 2 ರಿಂದ 3ಗಂಟೆ ತನಕ ಸಿಎಂ ಸರ್ಕಾರಿ ನಿವಾಸದಲ್ಲಿ ಅಮಿತ್ ಶಾ ಲಂಚ್ ಟಾಕ್ ನಡೆಯಲಿದೆ.
ಆ ಒಂದು ಗಂಟೆಯಲ್ಲಿ ರಾಜ್ಯ ಸಂಪುಟ ಪುನಾರಚನೆಯ ಅಸಲಿ ಆಟ ನಡೆಯಲಿದೆ. ಅದಾದ ಬಳಿಕ 4 ಗಂಟೆಗೆ ಬಿಜೆಪಿ ಕಚೇರಿಗೂ ತೆರಳಿ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಒಂದು ಗಂಟೆಗಳ ಕಾಲ ಬಿಜೆಪಿ ಕಚೇರಿಯಲ್ಲಿ ಅಮಿತ್ ಶಾ ಇರಲಿದ್ದು, ಈ ವೇಳೆ ಸಂಘಟನೆ, ಸರ್ಕಾರದ ರಿವ್ಯೂವ್ ಮಾಡಲಿದ್ದಾರೆ. ಇದನ್ನೂ ಓದಿ: ವರ್ಕ್ ಆರ್ಡರ್ ಇಲ್ಲದೇ ಕೆಲಸ ಮಾಡುತ್ತಿದ್ದರೆ ಬಂದ್ ಮಾಡಿಸಿ – ಅಧಿಕಾರಿಗಳಿಗೆ ಕಾರಜೋಳ ವಾರ್ನಿಂಗ್
ಏಪ್ರಿಲ್ 1 ರಂದು ಕೂಡ ಅಮಿತ್ ಶಾ ಅವರು ಕಚೇರಿಗೆ ಭೇಟಿ ನೀಡಿ ಕೋರ್ ಕಮಿಟಿ ಸಭೆ ನಡೆಸಿದ್ದರು. ಕಳೆದ ಬಾರಿ ಸಿದ್ದಗಂಗಾ ಮಠಕ್ಕೆ ತೆರಳಿ ಶ್ರೀಗಳ ಜಯಂತ್ಯೋತ್ಸವದಲ್ಲಿ ಭಾಗಿಯಾಗಿದ್ರು. ಈ ಬಾರಿ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಚಾಲುಕ್ಯ ವೃತ್ತದಲ್ಲಿ ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಿದ್ದಾರೆ.
ಒಟ್ಟಿನಲ್ಲಿ ತಿಂಗಳಾಗುತ್ತಿದ್ದಂತೆ ಅಮಿತ್ ಶಾ ಮತ್ತೆ ರಾಜ್ಯಕ್ಕೆ ಆಗಮಿಸುತ್ತಿರವುದು ಪಕ್ಷದ ವಲಯದಲ್ಲಿ ಸಂಚಲನ ಮೂಡಿಸಿದೆ. ಇದನ್ನೂ ಓದಿ: ತಮ್ಮದೇ ಪಕ್ಷದ ಮುಖಂಡರ ಫ್ಲೆಕ್ಸ್ ವಿರುದ್ಧ ಪ್ರತಾಪ್ ಸಿಂಹ ಗರಂ