ಪಬ್ಲಿಕ್ ಟಿವಿ
ಚಿಕ್ಕಬಳ್ಳಾಪುರ: ಸಮ್ಮಿಶ್ರ ಸರ್ಖಾರದ ಸಂಪುಟ ರಚನೆ ಫೈನಲ್ ಆಗುತ್ತಿದಂತೆ ಜೆಡಿಎಸ್ ಪಕ್ಷದ ಶಾಸಕರಲ್ಲಿ ಅಸಮಾಧಾನದ ಸ್ಫೋಟಗೊಂಡಿದ್ದು, ಅಧಿಕಾರ ಇಲ್ಲದಿದ್ದಾಗ ಬಾಚಿ ತಬ್ಬಿಕೊಳ್ಳುವ ಅಪ್ಪ-ಮಕ್ಕಳು, ಅಧಿಕಾರ ಬಂದಾಗ ಕನಿಷ್ಠ ಕಣ್ಣೆತ್ತು ನೋಡ್ತಾಯಿಲ್ಲ ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಕ್ಷೇತ್ರದ ಜೆಡಿಎಸ್ ಶಾಸಕ ಜೆ ಕೆ ಕೃಷ್ಣಾರೆಡ್ಡಿ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ.
ಜೆಡಿಎಸ್ ಪಕ್ಷದ ಜಿಲ್ಲೆಯ ಏಕೈಕ ಶಾಸಕ ಹಾಗೂ ರೆಡ್ಡಿ ಸಮುದಾಯ ಏಕೈಕ ಶಾಸಕರಾಗಿದ್ದ ಜೆ ಕೆ ಕೃಷ್ಣಾರೆಡ್ಡಿ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದರೆ ಇಂದು ಪ್ರಮಾಣ ವಚನ ಕಾರ್ಯಕ್ರಮಕ್ಕೆ ಕೇವಲ ಕೆಲವೇ ಗಂಟೆಗಳು ಬಾಕಿ ಉಳಿದಿದ್ದರೂ ಇದುವರೆಗೂ ಜೆಡಿಎಸ್ ವರಿಷ್ಠರು ಯಾವುದೇ ಮಾಹಿತಿ ನೀಡಿಲ್ಲ. ಕನಿಷ್ಠ ಕಾರ್ಯಕ್ರಮಕ್ಕೂ ಆಹ್ವಾನ ನೀಡದೇ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಗೆ ಒಂದು ಹಾಗೂ ಸಮುದಾಯ ಒಬ್ಬ ಶಾಸಕರಂತೆ ಸಚಿವ ಸ್ಥಾನದ ಭರವಸೆ ನೀಡಿದ್ದ ವರಿಷ್ಠರು ಸಾಮಾಜಿಕ ನ್ಯಾಯವನ್ನು ಮರೆತ್ತಿದ್ದಾರೆ. ಹಣವಂತರಿಗೆ ಮಣೆ ಹಾಕಿರುವ ವರಿಷ್ಠರು, ರೆಡ್ಡಿ ಸಮುದಾಯವನ್ನ ಕಡೆಗಣಿಸಿದ್ದಾರೆ, ಜಿಲ್ಲೆಯ ಏಕೈಕ ಜೆಡಿಎಸ್ ಶಾಸಕನಾಗಿದ್ದು, ಸರಿ ಸುಮಾರು ಜಿಲ್ಲೆಯ 3 ಲಕ್ಷಕ್ಕೂ ಹೆಚ್ಚು ಜೆಡಿಎಸ್ ಮತ ಹಾಕಿದ ಮತದಾರರಿಗೆ ಅನ್ಯಾಯ ಮಾಡಿದ್ದಾರೆ. ಪಕ್ಷ ಸಂಘಟನೆಗೆ ಅವಕಾಶವಿಲ್ಲದಂತೆ ಮಾಡಿದ್ದಾರೆ. ಎಲ್ಲರೂ ಅಪ್ಪ-ಮಕ್ಕಳ ಪಕ್ಷ ಅಂತಿದ್ದರು. ಆದರೆ ಅದು ಈಗ ಅರಿವಿಗೆ ಬರುತ್ತಿದೆ. ಮುಂದೆ ಕ್ಷೇತ್ರದಲ್ಲಿ ನನ್ನ ಕೆಲಸ ನಾನು ಮಾಡಿಕೊಂಡು ಹೋಗುತ್ತೇನೆ. ಮುಂದಿನ ನಡೆ ಬಗ್ಗೆ ತೀರ್ಮಾನ ಮಾಡುತ್ತೆನೆ ಎಂದು ಪಬ್ಲಿಕ್ ಟಿವಿ ಬಳಿ ದೂರವಾಣಿ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.