ತುಮಕೂರು: ಬಿಜೆಪಿ ಜಿಲ್ಲಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಪ್ತ ಸುರೇಶ್ ಗೌಡ ತಮ್ಮ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದು, ರಾಜೀನಾಮೆ ಕೊಟ್ಟಿರುವುದಾಗಿ ಫೆಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
ಕಳೆದ ಒಂದೂವರೆ ವರ್ಷದಿಂದ ಜಿಲ್ಲಾಧ್ಯಕ್ಷರಾಗಿದ್ದ ಸುರೇಶ್ ಗೌಡ, ಗ್ರಾಮಾಂತರ ಕ್ಷೇತ್ರದಲ್ಲಿ ಸಕ್ರಿಯವಾಗಲು ರಾಜೀನಾಮೆ ಕೊಟ್ಟಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಆದರೆ ಕಮಲ ಬಿಟ್ಟು ಕೈ ಹಿಡಿತಾರಾ ಎಂಬ ಮಾತುಗಳು ಸಹ ಕೇಳಿಬರುತ್ತಿವೆ. ಇದನ್ನೂ ಓದಿ: ಪಬ್ಲಿಕ್ ಮ್ಯೂಸಿಕ್ಗೆ ಏಳು ವಸಂತಗಳ ಸಂಭ್ರಮ
ಇತ್ತಿಚೆಗೆ ಪಕ್ಷದಲ್ಲಿ ಸಚಿವ ಮಾಧುಸ್ವಾಮಿ ಪ್ರಭಾವ ಹೆಚ್ಚಳವಾಗಿದ್ದು, ಸುರೇಶ್ ಗೌಡ ಮಾಧುಸ್ವಾಮಿ ವಿರುದ್ಧ ಅಸಮಾಧಾನಗೊಂಡಿದ್ದರು. ಇತ್ತೀಚೆಗೆ ಸಿಎಂ ತುಮಕೂರಿಗೆ ಬಂದಿದ್ದಾಗ ಸಹ ಸುರೇಶ್ ಗೌಡ ಗೈರಾಗಿದ್ದರು. ಕಾಂಗ್ರೆಸ್ ಸೇರಲು ತೆರೆ ಮರೆಯ ಕಸರತ್ತು ನಡೆಸಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಲು ಒಕ್ಕಲಿಗ ನಾಯಕರು ಒಗಟ್ಟಾಗುತಿದ್ದಾರೆ. ಜಿಲ್ಲೆಯ ಒಕ್ಕಲಿಗ ರಾಜಕೀಯ ನಾಯಕರಾದ ಜೆಡಿಎಸ್ ಶಾಸಕ ಎಸ್.ಆರ್.ಶ್ರೀನಿವಾಸ್, ಪರಿಷತ್ ಸದಸ್ಯ ಬೆಮೆಲ್ ಕಾಂತರಾಜು ಬಳಿಕ ಸುರೇಶ್ ಗೌಡ ಕಾಂಗ್ರೆಸ್ಗೆ ಸೇರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಜಿಲ್ಲೆಯ ಇನ್ನಿಬ್ಬರು ಬಿಜೆಪಿಯ ಒಕ್ಕಲಿಗ ಶಾಸಕರ ಕಾಂಗ್ರೆಸ್ ಸೇರ್ಪಡೆಗೆ ಸಹ ತೆರೆಮರೆಯ ವೇದಿಕೆ ಸಿದ್ಧವಾಗಿದೆ. ಒಕ್ಕಲಿಗ ಸಮುದಾಯದ ಪ್ರಭಾವಿ ಸ್ವಾಮೀಜಿಯ ಮೂಲಕ ಬಿಜೆಪಿಯ ಒಕ್ಕಲಿಗ ಶಾಸಕರಿಗೆ ಗಾಳ ಹಾಕಲಾಗಿದೆ ಎನ್ನಲಾಗುತ್ತಿದೆ.