ಶಿವಮೊಗ್ಗ: ವಿಧಾನಸಭಾ ಚುನಾವಣೆಗೆ ಇನ್ನೂ ಐದಾರು ತಿಂಗಳು ಬಾಕಿ ಇದ್ದು, ಬರುವ ಚುನಾವಣೆಯಲ್ಲಿ ಬಿಜೆಪಿ (BJP) 140 ಕ್ಕೂ ಹೆಚ್ಚು ಸ್ಥಾನವನ್ನ ಗೆಲ್ಲುವ ಮೂಲಕ ಕಾಂಗ್ರೆಸ್ (Congress) ಧೂಳಿಪಟವಾಗುವಂತೆ ಮಾಡಬೇಕು. ಇದಕ್ಕೆ ವಿಶೇಷ ಪರಿಶ್ರಮ, ಸಂಘಟನೆ, ಪಕ್ಷ ಬಲವರ್ಧನೆ ಆಗಬೇಕು ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (Yediyurappa) ತಿಳಿಸಿದರು.
ನಗರದ ಕಿಮ್ಮನೆ ರೆಸಾರ್ಟ್ನಲ್ಲಿ ಬಿಜೆಪಿ ಪ್ರಶಿಕ್ಷಣ ವರ್ಗ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಚುನಾವಣೆ, ಸಂಘಟನೆಯ ಬಗ್ಗೆ ಬಿಜೆಪಿಯವರು ತಯಾರಿಯಾಗಬೇಕು. ಸದ್ಯ ನಮ್ಮ ನಮ್ಮ ಕ್ಷೇತ್ರದಲ್ಲಿ ಬಿಜೆಪಿ ಸ್ಥಿತಿ ಏನಿದೆ, ಬೇರೆ ಪಕ್ಷಗಳ ಸ್ಥಿತಿ ಹೇಗಿದೆ ಎಂದು ಅರ್ಥ ಮಾಡಿಕೊಳ್ಳಬೇಕು. ಎದುರಾಳಿ ಪಕ್ಷಗಳ ಸಾಧನೆ ಬಗ್ಗೆಯೂ ಅರ್ಥೈಸಿಕೊಂಡು ಜನರಿಗೆ ಸರ್ಕಾರದ ಸಾಧನೆಗಳ ಬಗ್ಗೆ ತಿಳಿಹೇಳಬೇಕಿದೆ ಎಂದರು. ಇದನ್ನೂ ಓದಿ: ಕಾಂಗ್ರೆಸ್ನಲ್ಲಿ ಬಣ ಸಂಘರ್ಷ – ಡಿಕೆಶಿ ನಡೆಗೆ ಸಿದ್ದರಾಮಯ್ಯ ಕೊತಕೊತ!
ಮುಂದಿನ ದಿನಗಳಲ್ಲಿ ಬರುವ ಚುನಾವಣೆ ಪ್ರಚಾರಕ್ಕಾಗಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನೆಡ್ಡಾ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಹೆಚ್ಚಿನ ಶಾಸಕರನ್ನ ಗೆದ್ದು ತೋರಿಸುವ ಮೂಲಕ ಅವರ ಕೈ ಬಲಪಡಿಸಬೇಕು. ಶಾಸಕರು, ಸಂಸದರು ಸಂಘಟನೆಯನ್ನ ಗಟ್ಟಿಗೊಳಿಸಿದರೆ ಗುರಿ ತಲುಪಬಹುದು ಎಂದು ಹೇಳಿದರು.
ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎಂದು ಗುಡುಗಿದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ನಲ್ಲಿ ನಾಯಕತ್ವದ ಗೊಂದಲವಿದೆ. ನಾನು ಸಿಎಂ ಎಂದು ಹೇಳುವ ನಾಯಕರು ತಿರುಕನ ಕನಸು ಕಾಣ್ತಾ ಇದ್ದಾರೆ. ಸಿದ್ದರಾಮಯ್ಯ ಅಡ್ರೆಸ್ ಇಲ್ಲದಂತಾಗುತ್ತಾರೆ. ನಮ್ಮ ಕಾರ್ಯಕರ್ತರು ಕಾರ್ಯ ಪ್ರವೃತ್ತರಾಗಬೇಕು. ಚುನಾವಣೆ ಮತ್ತು ಸಂಘಟನೆಯನ್ನ ಬಲಗೊಳಿಸಿ 150 ಸ್ಥಾನ ಗೆಲ್ಲುವಂತೆ ಕರೆ ನೀಡಿದರು. ಇದನ್ನೂ ಓದಿ: ಸಿಎಂ ಕಚೇರಿಯಿಂದ ಕಾಣೆಯಾಯ್ತಾ ಬಿಬಿಎಂಪಿ ಫೈಲ್? – ಸಾವಿರಾರು ಕೋಟಿ ರೂ. ವ್ಯವಹಾರದ ಕಡತ ನಾಪತ್ತೆ