ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಶಾಸಕರ ಜೊತೆಗೆ ರಾತ್ರಿ ಭಜನೆ ಮಾಡಿದ್ದಾರೆ.
ಬಿಜೆಪಿ ಶಾಸಕರು ಕಳೆದ ಕೆಲವು ದಿನಗಳಿಂದ ರಮಡ ರೆಸಾರ್ಟಿನಲ್ಲಿ ವಾಸ್ತವ್ಯ ಮಾಡಿದ್ದಾರೆ. ಸೋಮವಾರ ರಾತ್ರಿ ಆರ್ಕೆಸ್ಟ್ರಾ ಆಯೋಜಿಸಿದ್ದ ಶಾಸಕರು ರಾತ್ರಿ ವಿಶ್ರಾಂತಿ ಪಡೆದು ಅಲ್ಲಿಂದ ನೇರವಾಗಿ ವಿಧಾನಸಭೆಗೆ ಆಗಮಿಸಿದ್ದರು. ಬಳಿಕ ಸಂಜೆ ರೆಸಾರ್ಟ್ ಸೇರಿದ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಎಂ.ಪಿ.ರೇಣುಕಾಚಾರ್ಯ, ಗೋವಿಂದ ಕಾರಜೋಳ, ರಾಜು ಗೌಡ, ಶಶಿಕಲಾ ಜೊಲ್ಲೆ ಸೇರಿದಂತೆ ಅನೇಕ ಶಾಸಕರು ತಾಳ ಹಿಡಿದು ಭಜನೆ ಮಾಡಿದರು.
ಕರ್ನಾಟಕದಲ್ಲಿ ಎರಡು ವಾರಗಳ ಹಿಂದೆ ಆರಂಭಗೊಂಡಿರುವ ‘ರಾಜಕೀಯ ಕ್ರಿಕೆಟ್’ ಟೂರ್ನಿಯ ಅಂತಿಮ ಫಲಿತಾಂಶ ಗುರುವಾರ ಪ್ರಕಟವಾಗಲಿದ್ದು ಯಡಿಯೂರಪ್ಪ “ಈ ಬಾರಿ ನಮಗೆ ಕಪ್” ಎಂದು ಹೇಳಿ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.
ಭಾರೀ ರಾಜ್ಯ ರಾಜಕೀಯ ಬೆಳವಣಿಗೆಗಳ ನಡೆಯುತ್ತಿರುವ ಬೆನ್ನಲ್ಲೇ ಫುಲ್ ಖುಷಿ ಮೂಡ್ನಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ರೆಸಾರ್ಟಿನಲ್ಲಿ ಕ್ರಿಕೆಟ್ ಆಡಿ ಸಂಭ್ರಮಿಸಿದ್ದಾರೆ.
ರಮಡ ರೆಸಾರ್ಟ್ ನಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಬ್ಯಾಟಿಂಗ್ ಮಾಡಿದ್ದಾರೆ. ಈ ವೇಳೆ ಎಂ.ಪಿ.ರೇಣುಕಾಚಾರ್ಯ ಸೇರಿದಂತೆ ಅನೇಕ ಶಾಸಕರು ಬಿ.ಎಸ್. ಯಡಿಯೂರಪ್ಪನವರಿಗೆ ಸಾಥ್ ಕೊಟ್ಟಿದ್ದಾರೆ. ಅಲ್ಲೇ ಇದ್ದ ಅನೇಕರು ಈ ದೃಶ್ಯವನ್ನು ತಮ್ಮ ಮೊಬೈಲ್ ಸೆರೆ ಹಿಡಿದಿದ್ದಾರೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಗುರುವಾರ ಸಂಜೆ ಇತಿಹಾಸ ಸೇರುವುದು ಖಂಡಿತ ಅಂತ ಬಿಜೆಪಿ ಮುಖಂಡರು ಕಂಠಘೋಷವಾಗಿ ಹೇಳಿದ್ದಾರೆ. ಬಿಜೆಪಿ ಶಾಸಕರು ತಂಗಿರುವ ರಮಡ ರೆಸಾರ್ಟ್ ಬಳಿ ಮಾತನಾಡಿದ ಶಾಸಕ ಸಿಟಿ ರವಿ, ಮಂಗಳವಾರ ಸುಪ್ರೀಂಕೋರ್ಟ್ ನಲ್ಲಿ ಸಮರ್ಥವಾಗಿ ಮೂರು ವಕೀಲರು ವಾದ ಮಾಡಿದ್ದಾರೆ. ವಾದ ಏನೇ ಇರಲಿ, ತೀರ್ಪು ಏನೇ ಇರಲಿ ಸರ್ಕಾರ ಬೀಳುವುದಂತು ನಿಶ್ಚಿತ ಎಂದರು.