– ವರ್ಗಾವಣೆ ದಂಧೆಯಿಂದ ಹಣ ಸಂಪಾದನೆ ಗಂಭೀರ ಆರೋಪ
ಯಾದಗಿರಿ: ಮಾಜಿ ಸಚಿವ ಬಾಬುರಾವ್ ಚಿಂಚನಸೂರು (Baburao Chinchansur) ಬಿಜೆಪಿ (BJP) ತಾಯಿ ಪಕ್ಷ ಎಂದು ಹೇಳಿದ್ದರು. ಈಗ ಅದೇ ತಾಯಿಗೆ ದ್ರೋಹ ಮಾಡಿ ಹೋಗಿದ್ದಾರೆ. ಇದರಿಂದ ಗುರಮಠಕಲ್ ಮತಕ್ಷೇತ್ರದ ಜನರಿಗೆ ಮೋಸ ಮಾಡಿದ್ದಾರೆ ಎಂದು ಮಾಜಿ ಕಾಡಾ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಗಿರೀಶ್ ಮಟ್ಟಣ್ಣನವರ್ (Girish Mattannavar) ಆರೋಪಿಸಿದ್ದಾರೆ.
ಯಾದಗಿರಿಯಲ್ಲಿ (Yadgiri) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಬುರಾವ್ ಚಿಂಚನಸೂರ್ಗೆ ಬಿಜೆಪಿ ಪಕ್ಷ ಎಲ್ಲಾ ಅಧಿಕಾರ ನೀಡಿತ್ತು. ಆದರೂ ಅಧಿಕಾರದ ದುರಾಸೆಗೆ ಪಕ್ಷಕ್ಕೆ ರಾಜೀನಾಮೆ ನೀಡಿರುವುದು ಕೋಲಿ ಸಮಾಜಕ್ಕೆ ಅನ್ಯಾಯವಾಗಿದೆ. ವಿಧಾನ ಪರಿಷತ್ ಸದಸ್ಯ ಸ್ಥಾನ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ಪಡೆದು ಅಧಿಕಾರ ಅನುಭವಿಸಿ ಪಕ್ಷ ತ್ಯಜಿಸಿರುವುದು ನೋವಿನ ಸಂಗತಿ ಎಂದಿದ್ದಾರೆ. ಇದನ್ನೂ ಓದಿ: ಮುಸ್ಲಿಂ ಟೋಪಿ ಧರಿಸಿ ಮಸೀದಿ ನಿರ್ಮಾಣಕ್ಕೆ ಭೂಮಿಪೂಜೆ ಮಾಡಿದ ಬಿಜೆಪಿ ಶಾಸಕ
ಶೋಷಿತ ವರ್ಗಗಳ ಏಳಿಗೆಗಾಗಿ ಕೆಲಸ ಮಾಡುತ್ತಾರೆ ಎಂದು ಅಧಿಕಾರ ನೀಡಿದ್ದರು. ಅವರ ಪತ್ನಿ ಅಮರೇಶ್ವರಿ ಚಿಂಚನಸೂರ್ ಅವರನ್ನು ಕೇಂದ್ರ ಆಹಾರ ನಿಗಮದ ನಿರ್ದೇಶಕರನ್ನಾಗಿ ಮಾಡಿದ್ದಾರೆ. ಅದನ್ನೆಲ್ಲ ಚಿಂಚನಸೂರ್ ಮರೆತಿದ್ದಾರೆ ಎಂದು ಕಿಡಿಕಾರಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನ ಜಿದ್ದಿಗೆ ಬಿದ್ದು ಸೋಲಿಸಿದ್ರು. ಪ್ರಿಯಾಂಕ್ ಖರ್ಗೆಯವರನ್ನು ಸೋಲಿಸುವುದಾಗಿ ತೊಡೆತಟ್ಟಿ, ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು. 15 ದಿನಗಳ ಹಿಂದೆ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಕಾಂಗ್ರೆಸ್ನ (Congress) ರಾಜ್ಯ ಹಾಗೂ ರಾಷ್ಟ್ರೀಯ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದ ಚಿಂಚನಸೂರ್ ಸಿದ್ದರಾಮಯ್ಯ, ಡಿಕೆಶಿ ಹಾವು ಮುಂಗುಸಿಯಂತಿದ್ದಾರೆ. ರಾಹುಲ್ ಗಾಂಧಿ ಅವರು ಬಚ್ಚಾ ಎಂದು ಹಿಯಾಳಿಸಿದ್ದರು. ಆದರೆ ನೈತಿಕತೆ ಇಲ್ಲದೇ ಕಾಂಗ್ರೆಸ್ ಪಕ್ಷಕ್ಕೆ ಯಾವ ಮುಖವನ್ನು ಇಟ್ಟುಕೊಂಡು ಸೇರ್ಪಡೆ ಮಾಡಿಕೊಳ್ಳುತ್ತಾರೆ ಎಂದು ಕೈ ನಾಯಕರಿಗೆ ಕುಟುಕಿದ್ದಾರೆ.
ಶಾಸಕ ಹಾಗೂ ಸಚಿವರಾಗಿದ್ದಾಗ ಬಾಬುರಾವ್ ಚಿಂಚನಸೂರ್ ವರ್ಗಾವಣೆ ದಂಧೆ ಮಾಡಿ, ಲಕ್ಷಾಂತರ ರೂ. ವಸೂಲಿ ಮಾಡಿದ್ದಾರೆ. ಒಂದೊಂದು ಹುದ್ದೆಗೆ ಐದು ಅಧಿಕಾರಿಗಳನ್ನು ನೇಮಿಸಿ ಪ್ರತಿಯೊಬ್ಬ ಅಧಿಕಾರಿಗಳಿಂದಲೂ ಹಣ ಪಡೆದು ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಮೂರ್ತಿ ಚಿಕ್ಕದಾದರೂ ಬಾಬುರಾವ್ ಚಿಂಚನಸೂರ್ ಅವರ ಆಸೆ ದೊಡ್ಡದು. ಸಮುದಾಯದ ಹೆಸರಿನಲ್ಲಿ ಅಧಿಕಾರ ಅನುಭವಿಸಿ, ಇಡೀ ರಾಜ್ಯದ ಕೋಲಿ ಸಮಾಜದ ಜನತೆಗೆ ಅನ್ಯಾಯ ಮಾಡಿದ ಅವರಿಗೆ ಮತದಾರರು ಪಾಠ ಕಲಿಸಲಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಇದನ್ನೂ ಓದಿ: ಜೆಡಿಎಸ್ ನಂಬಿ ಮೋಸ ಹೋದ ಒಕ್ಕಲಿಗರು ಈಗ ಅಭಿವೃದ್ಧಿ ಕಡೆಗೆ ಮುಖ ಮಾಡಿದ್ದಾರೆ: ಮಸಾಲಾ ಜಯರಾಮ್