ಚಂಡೀಗಢ: ಆಮ್ ಆದ್ಮಿ ಪಕ್ಷವನ್ನು (AAP) ಉರುಳಿಸಲು ಬಿಜೆಪಿ (BJP) ಮತ್ತು ಕಾಂಗ್ರೆಸ್ (Congress) ಪರಸ್ಪರ ಕುತಂತ್ರ ನಡೆಸುತ್ತಿವೆ ಎಂದು ಪಂಜಾಬ್ (Punjab) ಮುಖ್ಯಮಂತ್ರಿ ಭಗವಂತ್ ಮಾನ್ (Bhagwant Maan) ಆರೋಪಿಸಿದ್ದಾರೆ.
ಅವರಿಂದು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಾಗಿದ್ದು ರಾಜ್ಯದಲ್ಲಿ ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರ್ಕಾರವನ್ನು (Punjab Government) ಉರುಳಿಸಲು ಕೈಜೋಡಿವೆ. ಹಾಗಾಗಿ ರಾಜ್ಯ ವಿಧಾನಸಭೆಯಲ್ಲಿ ವಿಶ್ವಾಸ ನಿರ್ಣಯ ಮಂಡಿಸುವುದು ಅಗತ್ಯವಾಗಿದೆ ಎಂದು ಹೇಳಿದ್ದಾರೆ.
ಪಂಜಾಬ್ನಲ್ಲಿ ಹಿಂಬಾಗಿಲಿನಿಂದ ಸರ್ಕಾರ ರಚಿಸಲು ಬಿಜೆಪಿ ಪಕ್ಷಾಂತರ ನಿಷೇಧ ಕಾನೂನನ್ನು ಸಾಧನವಾಗಿ ಬಳಸುತ್ತಿದೆ. ದುರಾದೃಷ್ಟವಶಾತ್ ಕಾಂಗ್ರೆಸ್ ಸಹ ಇದನ್ನು ಬೆಂಬಲಿಸುತ್ತಿದೆ. ಬಿಜೆಪಿಯು ಮಧ್ಯಪ್ರದೇಶ, ಮಹಾರಾಷ್ಟ್ರ, ಕರ್ನಾಟಕ (Karnataka) ಮತ್ತು ಇತರ ರಾಜ್ಯಗಳಲ್ಲಿ ಶಾಸಕರನ್ನು ಸೆಳೆಯುವ ಮೂಲಕ ಚುನಾಯಿತ ಸರ್ಕಾರಗಳನ್ನು ಉರುಳಿಸಿದೆ. ಆದರೆ ತಮ್ಮ ಕೆಟ್ಟ ನಡೆಯಿಂದ ದೆಹಲಿಯಲ್ಲಿ ಮೂರು ಬಾರಿಯೂ ಅಧಿಕಾರಕ್ಕೆ ಬರುವಲ್ಲಿ ವಿಫಲರಾಗಿದ್ದಾರೆ. ಈಗ ಪಂಜಾಬ್ನಲ್ಲಿ ಶಾಸಕರನ್ನು ಖರೀದಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಬಿಜೆಪಿ (BJP) ತನ್ನ ಹಣದ ಚೀಲಗಳನ್ನು ಬಳಸಿಕೊಂಡು ಪ್ರಜಾಪ್ರಭುತ್ವಕ್ಕೆ ತುಂಬಲಾರದ ನಷ್ಟವುಂಟುಮಾಡುತ್ತಿದೆ. ಹಿಂದೆ ಕಾಂಗ್ರೆಸ್ (Congress) ಸಹ ಅದನ್ನೇ ಮಾಡಿತ್ತು. ಈಗ ಕೇಸರಿ ಪಕ್ಷವೂ ಅದೇ ಹಾದಿಯಲ್ಲಿ ಸಾಗುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಚಾಮರಾಜನಗರ ದಸರಾ ಉದ್ಘಾಟನೆಯಲ್ಲಿ ಕಪ್ಪು ಬಾವುಟ ಪ್ರದರ್ಶನ: ವಿ. ಸೋಮಣ್ಣ ಕೆಂಡಾಮಂಡಲ
ಇದೇ ವೇಳೆ ಭಾರತ್ ಜೋಡೋ ಯಾತ್ರೆ (Bharat Jodo Yatra) ಕುರಿತು ಟೀಕಿಸಿದ ಮಾನ್, ಕಾಂಗ್ರೆಸ್ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ `ಭಾರತ್ ಜೋಡೋ ಯಾತ್ರೆ’ ಹಮ್ಮಿಕೊಂಡಿದೆ. ಆದರೆ ಬಿಜೆಪಿಗೆ ಲಾಭ ಮಾಡಿಕೊಡುವ ಉದ್ದೇಶದಿಂದಲೇ ಗುಜರಾತ್ ಹಾಗೂ ಹಿಮಾಚಲ ಪ್ರದೇಶ ರಾಜ್ಯಗಳನ್ನ ಹೊರಗಿಡಲಾಗಿದೆ ಎಂದು ಹೇಳಿದ್ದಾರೆ.