ಬೆಂಗಳೂರು: ಮೈತ್ರಿ ಒಕ್ಕಲಿಗ ನಾಯಕರ ಶಕ್ತಿಪ್ರದರ್ಶನಕ್ಕೂ ಮುನ್ನ ಇಂದು ದೋಸ್ತಿ ನಾಯಕರ ದಂಡು ಆದಿಚುಂಚನಗಿರಿ ಮಠಕ್ಕೆ ತೆರಳಿದೆ.
ಹೆಚ್.ಡಿ ಕುಮಾರಸ್ವಾಮಿ, ಆರ್.ಅಶೋಕ್, ಸಿ.ಟಿ ರವಿ, ಶೋಭಾ ಕರಂದ್ಲಾಜೆ, ವಿ. ಸೋಮಣ್ಣ, ಅಶ್ವಥ್ ನಾರಾಯಣ್, ಪಿಸಿ ಮೋಹನ್, ಯದುವೀರ್ ಒಡೆಯರ್, ನಿಖಿಲ್, ಬೆಂಗಳೂರು ಗ್ರಾ, ಅಭ್ಯರ್ಥಿ ಸಿಎನ್ ಮಂಜುನಾಥ್ ಸೇರಿದಂತೆ ಹಲವರು ಮಠಕ್ಕೆ ಭೇಟಿ ಕೊಟ್ಟು ನಿರ್ಮಲಾನಂದ ಶ್ರೀಗಳ (Nirmalananda Swamiji) ಆಶೀರ್ವಾದ ಪಡೆದಿದ್ದಾರೆ.
ಈ ವೇಳೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಹೆಚ್ಡಿಕೆ, ಶ್ರೀಗಳ ಆಶೀರ್ವಾದ ಪಡೆಯಲಿಕ್ಕೆ ಮೈತ್ರಿ ಮುಖಂಡರು, ಅಭ್ಯರ್ಥಿಗಳು ಸಹ ಬಂದಿದ್ದೇವೆ. ಹೊಸತೊಡಕು ಸಂಭ್ರಮಕ್ಕೆ ಎಲ್ಲರನ್ನೂ ಆಹ್ವಾನಿಸಿದ್ದೇನೆ. ಅಲ್ಲೇನು ರಾಜಕೀಯ ಇಲ್ಲ. ಸಮುದಾಯ ಪ್ಲೇ ಕಾರ್ಡ್ ಅನ್ನೋಕೆ ಆಗಲ್ಲ ಎಂದರು. ಇದನ್ನೂ ಓದಿ: ಲೋಕ ಸಮರ ಗೆಲ್ಲೋಕೆ ರಣತಂತ್ರ- ಹೊಸತೊಡಕು ನೆಪದಲ್ಲಿ ಹೆಚ್ಡಿಕೆ ತೋಟದ ಮನೆಯಲ್ಲಿ ಸಭೆ
ಮೊದಲ ಹಂತದ ಚುನಾವಣಾ ಅಭ್ಯರ್ಥಿಗಳು ಸ್ವಾಮೀಜಿಗಳ ಆಶೀರ್ವಾದ ಪಡೆದಿದ್ದೇವೆ. ಬೆಂಗಳೂರು ನಗರದ 4 ಅಭ್ಯರ್ಥಿಗಳು, ಮೈಸೂರಿನ ಅಭ್ಯರ್ಥಿ, ಕೋಲಾರದ ಅಭ್ಯರ್ಥಿ, ತುಮಕೂರು, ಮಂಡ್ಯದ ನಾನು ಎಲ್ಲಾ ಜೊತೆಗೂಡಿ ಆಶೀರ್ವಾದ ಪಡೆದಿದ್ದೇವೆ. ವರ್ಷದ ಮೊದಲ ದಿನ ಗುರುಗಳ ಆಶೀರ್ವಾದ ಪಡೆಯೋದು ನಮ್ಮ ಕರ್ತವ್ಯ. ಬಳಿಕ ನಾವೆಲ್ಲ ಒಟ್ಟಾಗಿ ಹೊಸತೊಡಕು ಆಚರಣೆ ಮಾಡುತ್ತೇವೆ ಎಂದರು.
ಮುಖ್ಯಂಮತ್ರಿಗಳಿಗೆ ಈಗ ಒಕ್ಕಲಿಗರು ಕಾಣುತ್ತಿದ್ದಾರೆ. ಅವರಿಗೆ ಅಸ್ಥಿರತೆ ಕಾಡುತ್ತಿರೋ ಕಾರಣ ಈಗ ಬರುತ್ತಾ ಇದ್ದಾರೆ. ಇವರ ಸರ್ಕಾರದಲ್ಲಿ ಹೇಗೆ ನಡೆಸಿಕೊಂಡಿದ್ದಾರೆ ಅನ್ನೋದು ಗೊತ್ತಿದೆ. ನಾವಿಲ್ಲಿ ಡಿಕೆ ಶಿವಕುಮಾರ್ (DK Shivakumar) ರೀತಿ ಟಿವಿ ಕುಕ್ಕರ್ ಕೊಡುವ ಕಾರ್ಯಕ್ರಮ ಅಲ್ಲ. ಜಸ್ಟ್ ಗೆಟ್ ಟು ಗೆದರ್ ಅಷ್ಟೇ ಎಂದು ಹೆಚ್ಡಿಕೆ ಸ್ಪಷ್ಟಪಡಿಸಿದರು.
ಆರ್.ಅಶೋಕ್ (R. Ashok) ಮಾತನಾಡಿ, ಇಂದು ಶ್ರೀಗಳ ಆರ್ಶೀವಾದ ಪಡೆಯುವುದಕ್ಕೆ ಮೈತ್ರಿ ನಾಯಕರು ಬಂದಿದ್ದೇವೆ. ಶ್ರೀಗಳ ಆರ್ಶೀವಾದ, ಅವರ ಬೆಂಬಲದೊಂದಿಗೆ ಚುನಾವಣೆ ಪ್ರಚಾರಕ್ಕೆ ಹೋಗ್ತೀವಿ ಎಂದರು. ಇದೇ ವೇಳೆ ಬಿಡದಿ ತೋಟದಲ್ಲಿ ಹೊಸತೊಡಕು ವಿಚಾರಕ್ಕೆ ಪ್ರತಿಕ್ರಿಯಿಸಿ, ಇನ್ನು ಹೋಗುವುದು ನಿರ್ಧಾರ ಆಗಿಲ್ಲ. ಒಂದೊಳ್ಳೆ ಸಂದೇಶ ಹೋಗಬೇಕಿದೆ. ಎಲ್ಲಾ ಸಮುದಾಯದವರು, ಬಿಜೆಪಿಗೆ, ಮೋದಿಗೆ ಮತ ಹಾಕಬೇಕೆಂಬ ಅಭಿಪ್ರಾಯಕ್ಕೆ ಬಂದಿದ್ದಾರೆ. ಇಲ್ಲಿ ಆರ್ಶೀವಾದ ಪಡೆದರೆ ಇನ್ನಷ್ಟು ಬೆಂಬಲ ಸಿಗುತ್ತದೆ ಎಂದು ಹೇಳಿದರು.
ರಾಹುಲ್ ಗಾಂಧಿ ಚುನಾವಣೆ ಬದಲಾಯಿಸಲು ಸಾಧ್ಯವಿಲ್ಲ. ಅವರು ಹೋದ ಕಡೆ ಎಲ್ಲಾ ಸೋತಿದ್ದಾರೆ. ಮೋದಿಯವರು (Narendra Modi) ಬರುವುದರಿಂದ ನಮಗೆ ಸಹಾಯವಾಗುತ್ತೆ. ರಾಹುಲ್ ಗಾಂಧಿ ಬರುವುದರಿಂದ ಇನ್ನು ವೋಟ್ ಅವರಿಗೆ ಮೈನಸ್ ಆಗುತ್ತೆ ಎಂದು ತಿಳಿಸಿದರು.
ನಿರ್ಮಲಾನಂದ ಶ್ರೀಗಳ ಮೈತ್ರಿ ಅಭ್ಯರ್ಥಿಗಳು ಪಡೆದಿದ್ದೇವೆ. ಪ್ರಜಾಪ್ರಭುತ್ವ ಯುದ್ಧದಲ್ಲಿ ಗುರು ರಕ್ಷೆ ಬೇಕು ಎಂದು ಸಿ.ಟಿ ರವಿ ಹೇಳಿದ್ದಾರೆ. ಭಾರತ ವಿಶ್ವಗುರು ಆಗಬೇಕು ಮೋದಿ ಪ್ರಧಾನಿಯಾಗಬೇಕು. ಹಾಗಾಗಿ ಆಶೀರ್ವಾದ ಪಡೆಯಲು ಬಂದಿದ್ದೇವೆ. ಸನಾತನ ಧರ್ಮ ವಿರೋಧಿಯಾಗಿ ವರ್ತಿಸುತ್ತಿದ್ದಾರೆ. ಧರ್ಮವನ್ನ ಡೆಂಗ್ಯೂ ಮಲೇರಿಯಾಗೆ ಹೋಲಿಕೆ ಮಾಡಿದ್ದರು. ಮಠ ದೇವಾಸ್ಥಾನ ಸನಾತನ ಧರ್ಮಗಳ ಪ್ರತೀಕ. ಮಠ ದೇವಸ್ಥಾನ ನಾಶವಾಗಬೇಕು ಅನ್ನೋದು ಅವರ ಉದ್ದೇಶ. ಸನಾತನ ಧರ್ಮ ಉಳಿವಿಗಾಗಿ ಮತ್ತೆ ಮೋದಿಯವರು ಬೇಕು ಎಂದು ಹೇಳಿದರು.