ಹಾವೇರಿ: ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಕಬ್ಬಿಣ ಕಂಥಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸ್ವಾಮೀಜಿ ಹಿರೆಕೇರೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ನಂಬಿಕೆ ದ್ರೋಹಿ ಅಧಿಕಾರದ ಆಸೆಗಾಗಿ ಸುಳ್ಳು ಹೇಳುವ ಸ್ವಾಮೀಜಿ ಎಂದು ಜನರು ಸಾಮಾಜಿಕ ಜಾಲತಾಣಗಳಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಬಿಎಸ್ವೈ ಪುತ್ರನ ಸಂಧಾನ ವಿಫಲ – ಸ್ಪರ್ಧೆಗೆ ನಿಲ್ತೀನಿ ಎಂದ ಸ್ವಾಮೀಜಿ
ನಮ್ಮ ರಟ್ಟಿಹಳ್ಳಿ ಗುರುಗಳನ್ನು ಬಿಡದ ಡಿಕೆಶಿ ಮತ್ತು ಕುಮಾರಸ್ವಾಮಿ ಹೊಲಸು ಬುದ್ಧಿ ಎಂದು ಒಬ್ಬರು ಪೋಸ್ಟ್ ಹಾಕಿದ್ದಾರೆ. ಮತ್ತೊಬ್ಬರು ನಾಡಿನ ಅನೇಕ ಮಠಾಧೀಶರು ಯಡಿಯೂರಪ್ಪ ಸಿಎಂ ಆಗಿ ಮುಂದುವರಿಯಲೆಂದು ಹರಸುತ್ತಿರುವಾಗ ನಮ್ಮ ತಾಲೂಕಿನ ಶ್ರೀಗಳ ನಡೆ ಬೇಸರ ತರಿಸಿದೆ ಎಂದು ಬರೆದುಕೊಂಡಿದ್ದಾರೆ.
ಮತ್ತೊಬ್ಬರು ತಮ್ಮ ಪೋಸ್ಟ್ ನಲ್ಲಿ ಸಮಾಜದಲ್ಲಿ ಗುರು-ಸ್ಥಾನ ಹೊಂದಿ ಸರ್ವ ಸಮಾಜದ ಭಕ್ತರಿಗೆ ಆಶೀರ್ವಾದ ಮಾಡುವವರು ಇಂದು ಭಕ್ತರ ಹತ್ತಿರ ಆಶೀರ್ವಾದ ಮಾಡಿ ಎಂದು ಕೇಳಲು ಬರುವುದು ನೋವಿನ ಸಂಗತಿ ಎಂದು ಹಿರೆಕೇರೂರಿನ ಬಿಜೆಪಿ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡಿದ್ದಾರೆ.
ಚುನಾವಣೆಗೆ ನಿಲ್ಲಬೇಡಿ ಎಂದು ಬಿ.ವೈ ರಾಘವೇಂದ್ರ ಬೇಡಿಕೊಂಡಿದ್ದರು. ಬಿಸಿ ಪಾಟೀಲ್ ಅವರನ್ನು ಸೋಲಿಸಲು ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಮಾಸ್ಟರ್ಪ್ಲಾನ್ ಮಾಡಿದ್ದಾರೆ. ವೀರಶೈವ ಲಿಂಗಾಯತರ ವೋಟು ಒಡೆಯಲು ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಈ ರಣತಂತ್ರ ರೂಪಿಸಿದ್ದಾರೆ. ಹಾಗಾಗಿ ಕಾರ್ಯಕರ್ತರು ಸ್ವಾಮೀಜಿ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.