ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಆಪ್ತ ಸಂತೋಷ್ ಜೊತೆ ಕಾರ್ಯಕರ್ತರು ಸೆಲ್ಫಿಗೆ ಮುಗಿಬಿದ್ದ ಪ್ರಸಂಗವೊಂದು ಇಂದು ನಡೆದಿದೆ.
ನಾಲ್ಕನೇ ಬಾರಿ ಸಿಎಂ ಆಗುವ ಉತ್ಸಾಹದಲ್ಲಿರುವ ಬಿ.ಎಸ್.ಯಡಿಯೂರಪ್ಪ ಅವರಿಗೆ ಶುಭಾಶಯ ಕೋರಲು ಅವರ ನಿವಾಸಕ್ಕೆ ಪಕ್ಷದ ಬೆಂಬಲಿಗರು, ಕಾರ್ಯಕರ್ತರು ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದರು. ಬೆಳಗ್ಗೆ 6 ಗಂಟೆಯಿಂದಲೇ ಬಿಎಸ್ವೈ ನಿವಾಸ ದವಳಗಿರಿಗೆ ಆಗಮಿಸಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರುತ್ತಿರುವುದು ಸಂತಸ ತಂದಿದೆ ಎಂದು ಸಿಹಿ ಹಂಚಿ ಸಂಭ್ರಮಿಸಿದ್ದರು.
ದವಳಗಿರಿಗೆ ಮನೆಗೆ ಬಂದಿರುವ ಬಿಜೆಪಿ ಕಾರ್ಯಕರ್ತರು ಹಾಗೂ ಯಡಿಯೂರಪ್ಪ ಅಭಿಮಾನಿಗಳು ಸೇರಿದಂತೆ ಹಲವರು ಸಂತೋಷ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಸಂತೋಷ್ ಅವರು ಆಪರೇಷನ್ ಕಮಲದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಹೇಳಲಾಗುತ್ತಿತ್ತು. ಅಲ್ಲದೆ ಇದಕ್ಕೆ ಪೂರಕವಾಗಿ ಅವರ ಫೋಟೋಗಳು ಕೂಡ ಹರಿದಾಡುತ್ತಿತ್ತು. ಇದನ್ನೂ ಓದಿ: Exclusive: ವಿಮಾನ ನಿಲ್ದಾಣದಲ್ಲಿ ಡಿಕೆಶಿ, ಬಿಎಸ್ವೈ ಆಪ್ತ ಸಂತೋಷ್ ನಡುವೆ ಕಿತ್ತಾಟ
ಇತ್ತ ಕಾಂಗ್ರೆಸ್ ನಾಯಕರ ಮನವೊಲಿಕೆಗೆ ಜಗ್ಗದ ಅತೃಪ್ತ ಶಾಸಕ ಎಂ.ಟಿ.ಬಿ ನಾಗರಾಜ್ ಅವರು ವಿಶೇಷ ವಿಮಾನದಲ್ಲಿ ಮುಂಬೈನತ್ತ ಪ್ರಯಾಣ ಬೆಳೆಸಿದ ಸಂದರ್ಭದಲ್ಲಿ ಸಂತೋಷ್ ಕಾಣಿಸಿಕೊಂಡಿದ್ದರು. ಎಂಟಿಬಿ ನಾಗರಾಜ್ ಅವರನ್ನು ವಿಮಾನ ಹತ್ತಿಸುವವರೆಗೂ ಅವರ ಹಿಂದೆ ಸಂತೋಷ್ ಜೊತೆಯಲ್ಲೇ ಇದ್ದರು. ಇದಕ್ಕೂ ಮೊದಲು ಪಕ್ಷೇತರರಾದ ಶಂಕರ್ ಮತ್ತು ನಾಗೇಶ್ ಅವರನ್ನು ಮುಂಬೈಗೆ ಕಳುಹಿಸುವಲ್ಲಿ ಸಂತೋಷ್ ಯಶಸ್ವಿಯಾಗಿದ್ದರು.