ಚಿಕ್ಕಬಳ್ಳಾಪುರ: ಬರ್ತ್ ಡೇ ಪಾರ್ಟಿಗೆ ಆಗಮಿಸಿದ ಸಾಫ್ಟ್ ವೇರ್ ಇಂಜಿನಿಯರ್ ಮೃತನಾದ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಜಕ್ಕಲಮಡಗು ಜಲಾಶಯದ ಹಿನ್ನೀರಿನಲ್ಲಿ ನಡೆದಿದೆ.
ಬೆಂಗಳೂರು ನಗರದ ಸುಂಕದಕಟ್ಟೆ ನಿವಾಸಿ, ಅಕ್ಸೆಂಚರ್ ಕಂಪನಿ ಉದ್ಯೋಗಿ, ಸಾಫ್ಟ್ ವೇರ್ ಇಂಜಿನಿಯರ್ ರೋಹಿತ್ (24) ಸಾವನ್ನಪ್ಪಿದ ಯುವಕ. 5 ಜನ ಸ್ನೇಹಿತರೊಂದಿಗೆ ಬರ್ತ್ ಡೆ ಪಾರ್ಟಿ ಆಚರಣೆಗೆ ರೋಹಿತ್ ಬಂದಿದ್ದ. ಈ ವೇಳೆ ಹಿನ್ನೀರಿನಲ್ಲಿರುವ ಮರದ ಮೇಲೆ ಹತ್ತಿ ಸ್ನೇಹಿತರು ಸೆಲ್ಫಿ, ವೀಡಿಯೋ ಮಾಡಿಕೊಳ್ಳುತ್ತಿದ್ದರು. ಇದನ್ನೂ ಓದಿ: ನೆಟ್ಟಿಗರ ಮನಗೆದ್ದ ನ್ಯೂಸ್ಪೇಪರ್ ಬಾಯ್
ಈಜು ಬರದಿದ್ದರೂ ಸ್ನೇಹಿತರು ನೀರಿಗೆ ಇಳಿದಿದ್ದರು. ಕುಡಿದ ಅಮಲಿನಲ್ಲಿ ಮರದ ಮೇಲೆ ಹತ್ತಿ ರೋಹಿತ್ ಹುಚ್ಚಾಟ ಮಾಡಿದ್ದಾನೆ. ಈ ವೇಳೆ ಮರದ ಮೇಲಿಂದ ಬಿದ್ದು, ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಸೆಲ್ಫಿ ಕ್ರೇಜ್ ಗಾಗಿ ಹುಚ್ಚಾಟ ಆಡಲು ಹೋಗಿ ರೋಹಿತ್ ಶವವಾಗಿದ್ದಾನೆ. ಸ್ಥಳದಲ್ಲಿ ಮೃತನ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಜೊತೆಗಿದ್ದ ಸ್ನೇಹಿತರ ವಿರುದ್ಧವೂ ಆಕ್ರೋಶ ಹೊರಹಾಕಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಶವವನ್ನು ನೀರಿನಿಂದ ಹೊರ ತೆಗೆದಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ ಜಕ್ಕಲಮಡಗು ನಂದಿಗಿರಿಧಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.