ಬೆಂಗಳೂರು: ವಿಧಾನಸೌಧ ಪ್ರವೇಶದ ಗೇಟ್ ಬಳಿ 25.76 ಲಕ್ಷ ರೂ. ಹಣ ಸಿಕ್ಕ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಟೈಪಿಸ್ಟ್ ಮೋಹನ್ ಬಳಿ ಸಿಕ್ಕ ಹಣದ ಹಿಂದೆ ಮತ್ತೊಬ್ಬ ಸಚಿವರ ಕೈವಾಡವಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಮಿಕ ಸಚಿವ ವೆಂಕಟರಮಣಪ್ಪ ಆಪ್ತ ಸಹಾಯಕ ಕೃಷ್ಣಮೂರ್ತಿ ಎಂಬವರಿಗೆ ವಿಧಾನಸೌಧ ಪೊಲೀಸರು ನೋಟಿಸ್ ಜಾರಿ ಮಾಡಿದ್ದು, ವಿಚಾರಣೆ ವೇಳೆ ಟೈಪಿಸ್ಟ್ ಮೋಹನ್ ಕೃಷ್ಣಮೂರ್ತಿ ಅವರ ಬಗ್ಗೆ ಮಾಹಿತಿ ನೀಡಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ. ಹಣ ಯಾರಿಗೆ ಸಂಬಂಧಿಸಿದ್ದು ಹಾಗೂ ಯಾವ ಕಾರಣಕ್ಕೆ ಹಣ ತರಲಾಗಿತ್ತು ಎಂಬ ಬಗ್ಗೆ ಉತ್ತರ ನೀಡುವಂತೆ ಕೃಷ್ಣ ಅವರಿಗೆ ನೋಟಿಸ್ನಲ್ಲಿ ಪೊಲೀಸರು ಮಾಹಿತಿ ಕೇಳಿದ್ದಾರೆ.
ಸದ್ಯ ಪೊಲೀಸರು ನೋಟಿಸ್ ನೀಡಿರುವ ಹಿನ್ನೆಲೆಯಲ್ಲಿ ಸಚಿವ ವೆಂಕಟರಮಣಪ್ಪ ಅವರ ಕೈವಾಡ ಇದೆಯಾ ಎಂಬ ಅನುಮಾನಕ್ಕೆ ಕಾರಣವಾಗಿದೆ. ಈ ಹಿಂದೆ ಕೃಷ್ಣಮೂರ್ತಿ ಅವರು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸೇರಿದಂತೆ ಹಲವರ ಬಳಿ ಆಪ್ತ ಸಹಾಯಕರಾಗಿ ಕಾರ್ಯನಿರ್ವಹಿಸಿದ್ದಾರೆ. ಸಚಿವ ವೆಂಕಟರಮಣಪ್ಪ ಅವರ ಎಲ್ಲಾ ಕಾರ್ಯಗಳನ್ನು ಅವರ ಪುತ್ರ ನೋಡಿಕೊಳ್ಳುತ್ತಿದ್ದು, ಈ ಹಣವನ್ನು ಅವರಿಗೆ ತಲುಪಿಸಲು ತಂದಿದ್ದರು ಎನ್ನಲಾಗಿದೆ.
ಇಂದು ಪೊಲೀಸರ ವಿಚಾರಣೆಯಲ್ಲಿ ಟೈಪಿಸ್ಟ್ ಮೋಹನ್ ವಿಚಾರಣೆಯನ್ನು ವಿಧಾನಸಭೆ ಪೊಲೀಸರು ನಡೆಸಿದ್ದರು. ಈ ವಿಚಾರಣೆಯಲ್ಲಿ ಮೋಹನ್ ಸಚಿವರ ಆಪ್ತ ಸಹಾಯಕರ ಹೆಸರು ಬಾಯ್ಬಿಟ್ಟಿದ್ದಾನೆ. ಈ ಹಿಂದೆ ವಿಧಾನಸಭೆಯಲ್ಲಿ ಹಣದ ಹೊಳೆ ಹರಿಯುತ್ತಿದೆ ಎಂದು ಸಿಎಂ ಕುಮಾರಸ್ವಾಮಿ ಅವರು ಹೇಳಿದ್ದರು. ಅಲ್ಲದೇ ಇದಕ್ಕೆ ಕಡಿವಾಣ ಹಾಕುವುದಾಗಿ ಎಚ್ಡಿಕೆ ಆಶ್ವಾಸನೆ ನೀಡಿದ್ದರು. ಆದರೆ ಸದ್ಯ ಅವರ ಸರ್ಕಾರದ ಸಚಿವರ ಆಪ್ತ ಸಹಾಯಕರ ಹೆಸರು ಪ್ರಕರಣದಲ್ಲಿ ಕೇಳಿ ಬಂದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv