ಜೈಪುರ್: ಲೋಕಸಭಾ ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್ ಭಾರೀ ಹಿನ್ನಡೆಯಾಗಿದೆ. ಬರೋಬ್ಬರಿ 400 ಕಾರ್ಯಕರ್ತರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬೆಳವಣಿಗೆ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದೆ ಎಂದು ಮೂಲಗಳು ತಿಳಿಸಿವೆ.
ನಾಗೌರ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಲೋಕತಾಂತ್ರಿಕ್ ಪಾರ್ಟಿ (ಆರ್ಎಲ್ಪಿ) ಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ನಾಗೌರ್ ಸಂಸದ ಮತ್ತು ಆರ್ಎಲ್ಪಿ ಮುಖ್ಯಸ್ಥ ಹನುಮಾನ್ ಬೇನಿವಾಲ್ ಅವರನ್ನು ಕಾಂಗ್ರೆಸ್ ಇಲ್ಲಿ ಕಣಕ್ಕಿಳಿಸಿದೆ. ಇದು ಕಾಂಗ್ರೆಸ್ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ.
ಏತನ್ಮಧ್ಯೆ, ಬೆನಿವಾಲ್ ನೀಡಿದ ದೂರು ಹಾಗೂ ನಾಗೌರ್ನ ಬಿಜೆಪಿ ಅಭ್ಯರ್ಥಿ ಜ್ಯೋತಿ ಮಿರ್ಧಾ ಪರವಾಗಿ ಪ್ರಚಾರ ಮಾಡಿದ ಆರೋಪದ ಮೇಲೆ ಮೂವರು ಕಾಂಗ್ರೆಸ್ ಕಾರ್ಯಕರ್ತರನ್ನು ಆರು ವರ್ಷಗಳ ಕಾಲ ಅಮಾನತುಗೊಳಿಸಲಾಗಿತ್ತು.
ಮಾಜಿ ಶಾಸಕ ಭರರಾಮ್, ಕುಚೇರಾ ಪುರಸಭೆ ಅಧ್ಯಕ್ಷ ತೇಜ್ಪಾಲ್ ಮಿರ್ಧಾ ಮತ್ತು ಸುಖರಾಮ್ ದೊಡ್ವಾಡಿಯಾ ಸೇರಿದಂತೆ ಈ ಕಾಂಗ್ರೆಸ್ ಮುಖಂಡರನ್ನು ಅಮಾನತುಗೊಳಿಸಿದ್ದು, ನಾಗೌರ್ನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಯಿತು.
ಅಮಾನತುಗೊಳಿಸಿರುವುದನ್ನು ವಿರೋಧಿಸಿ ಮೂವರು ಕಾಂಗ್ರೆಸ್ ನಾಯಕರು ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಇದೇ ವೇಳೆ ಶುಕ್ರವಾರ ಸುದ್ದಿಗೋಷ್ಠಿ ಕರೆದಿದ್ದ ತೇಜ್ಪಾಲ್ ಮಿರ್ಧಾ, ವಿಧಾನಸಭಾ ಚುನಾವಣೆ ವೇಳೆ ನಾಗೌರ್ನಲ್ಲಿ ಕಾಂಗ್ರೆಸ್ ಪ್ರಬಲ ಸ್ಥಾನದಲ್ಲಿತ್ತು. ಎಂಟರಲ್ಲಿ ನಾಲ್ಕು ಸ್ಥಾನಗಳನ್ನು ಗೆದ್ದಿತ್ತು. ಲೋಕಸಭೆ ಚುನಾವಣೆಯಲ್ಲಿಯೂ ಅದರ ಸ್ಥಾನ ಅಷ್ಟೇ ಬಲವಾಗಿತ್ತು. ಹೀಗಿದ್ದರೂ, RLP ಯೊಂದಿಗೆ ಏಕೆ ಮೈತ್ರಿ ಮಾಡಿಕೊಳ್ಳಲಾಯಿತು ಎಂದು ಪ್ರಶ್ನಿಸಿದ್ದರು.
ಹನುಮಾನ್ ಬೇನಿವಾಲ್ ನಾಗೌರ್ನಲ್ಲಿ ಕಾಂಗ್ರೆಸ್ ಅನ್ನು ನಾಶಮಾಡಲು ಪ್ರಯತ್ನಿಸುತ್ತಿರುವ ಸಾಧನವಿದ್ದಂತೆ. ಅಂತಹ ವ್ಯಕ್ತಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದರಿಂದ ಕಾಂಗ್ರೆಸ್ ಕಾರ್ಯಕರ್ತರು ತೀವ್ರ ಆಘಾತಕ್ಕೊಳಗಾಗಿದ್ದಾರೆ. ಅದಕ್ಕಾಗಿಯೇ ನಾವೆಲ್ಲರೂ ನಮ್ಮ ಸಾಮೂಹಿಕ ರಾಜೀನಾಮೆ ಪತ್ರವನ್ನು ನೀಡುತ್ತಿದ್ದೇವೆ ಎಂದು ಮಿರ್ಧಾ ಸ್ಪಷ್ಟಪಡಿಸಿದ್ದಾರೆ.