ಬೀದರ್: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಚಳುವಳಿ ಮಾಡಲು ಕಾರಂಜಾ ಸಂತ್ರಸ್ತರು ಮಂದಾಗಿದ್ದಾರೆ.
ಬರೋಬ್ಬರಿ 40 ವರ್ಷಗಳಿಂದ ಕಾರಂಜಾ ಹಿನ್ನೀರಿನಲ್ಲಿ ಕಳೆದುಕೊಂಡ ತಮ್ಮ ಭೂಮಿಯ ಪರಿಹಾರಕ್ಕಾಗಿ ಹೋರಾಟ ಮಾಡುತ್ತಾ ಬಂದರೂ ಇನ್ನೂ ನೈಯಾಪೈಸೆಯ ಪರಿಹಾರ ಸಿಕ್ಕಿಲ್ಲ. ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಬೇಸತ್ತಿರುವ ಕಾರಂಜಾ ಸಂತ್ರಸ್ತರು ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಅಂಚೆ ಪತ್ರ ಚಳುವಳಿ ಮಾಡಲು ಮುಂದಾಗಿದ್ದಾರೆ.
ಈಗಾಗಲೇ ಕಾರಂಜಾ ಹಿನ್ನೀರಿನಲ್ಲಿ ಭೂಮಿ ಕಳೆದುಕೊಂಡಿರುವ 28 ಹಳ್ಳಿಗಳಲ್ಲಿ ಪತ್ರಗಳನ್ನು ಹಂಚಲಾಗುತ್ತದೆ. ಈ ಪತ್ರಗಳನ್ನು ಕಾರಂಜಾ ಸಂತ್ರಸ್ತರು ಮೋದಿಗೆ ಪೋಸ್ಟ್ ಮಾಡಲಿದ್ದು, ಪ್ರಧಾನಿಯಿಂದಾದ್ರು ಪರಿಹಾರ ಸಿಗಬಹುದು ಎಂಬ ಭರವಸೆಯಲ್ಲಿ ಇದ್ದಾರೆ.
2013 ರ ಸಾರ್ವತ್ರಿಕ ಚುನಾವಣೆಯಲ್ಲಿ ಬೀದರ್ ಜಿಲ್ಲೆಯನ್ನು ಮಿನಿ ಸಿಂಗಾಪೂರ್ ಮಾಡುವುದಾಗಿ ಭರವಸೆ ನೀಡಿ ವಿಜಯಶಾಲಿಯಾಗಿದ್ದ ನೈಸ್ ಖ್ಯಾತಿಯ ಅಶೋಕ್ ಖೇಣಿ ಸಾಹೇಬ್ರು ಕೂಡಾ ಕಾರಂಜಾ ಸಂತ್ರಸ್ತರಿಗೆ ನಾನು ಗೆದ್ದು ಬಂದರೆ ಪರಿಹಾರ ಕೊಡಿಸುವುದಾಗಿ ಮಾತುಕೊಟ್ಟು ತಪ್ಪಿದ್ದರು. ಹೀಗಾಗಿ ಎಲ್ಲಾ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಹುಸಿ ಭರವಸೆಯಿಂದ ಬೇಸತ್ತಿರುವ ಕಾರಂಜಾ ಸಂತ್ರಸ್ತರು 1 ಸಾವಿರ ಅಂಚೆ ಪತ್ರಗಳನ್ನು ಪ್ರಧಾನಿಗೆ ಕಳಿಸಲು ನಿರ್ಧಾರ ಮಾಡಿದ್ದಾರೆ.