ತಿರುವನಂತಪುರಂ: ಸ್ಯಾಂಡಲ್ವುಡ್ ನಟಿ ಭಾವನಾ ಮೆನನ್ 5 ವರ್ಷಗಳ ಹಿಂದಿನ ಕಹಿ ನೆನಪನ್ನು ನೆನೆದು ಸೋಶಿಯಲ್ ಮೀಡಿಯಾದಲ್ಲಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
ಭಾವನಾ ಹೇಳಿದ್ದೇನು?: ಇದು ಸುಲಭದ ಪ್ರಯಾಣವಾಗಿರಲಿಲ್ಲ. ಬಲಿಪಶು ಆಗಿ ನಂತರ ಬದುಕುಳಿಯುವವರೆಗಿನ ಪ್ರಯಾಣ ಇದಾಗಿತ್ತು. ನಾನು ಅಪರಾಧ ಎಸಗಿದವಳಲ್ಲ. ಆದರೂ, ನನ್ನನ್ನು ಅವಮಾನಿಸುವ, ನನ್ನ ಧ್ವನಿಯನ್ನು ಅಡಗಿಸುವ ಅನೇಕ ಪ್ರಯತ್ನಗಳು ನಡೆದಿವೆ. ಆದರೆ ಅಂತಹ ಸಮಯದಲ್ಲಿ ನನ್ನ ಧ್ವನಿಯನ್ನು ಜೀವಂತವಾಗಿಡಲು ಕೆಲವರು ಮುಂದಾದರು. ಈಗ ಅನೇಕ ಧ್ವನಿಗಳು ನನ್ನ ಪರವಾಗಿ ಮಾತನಾಡುತ್ತಿವೆ. ಇದನ್ನು ನೋಡಿದಾಗ ನ್ಯಾಯಕ್ಕಾಗಿ ಈ ಹೋರಾಟದಲ್ಲಿ ನಾನು ಒಬ್ಬಂಟಿಯಾಗಿಲ್ಲ ಎಂದು ನನಗೆ ಮನವರಿಕೆಯಾಗಿದೆ. ನ್ಯಾಯವು ಮೇಲುಗೈ ಸಾಧಿಸಲು, ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡಲು, ಯಾರೂ ಮುಂದೆ ಇಂತಹ ಅಗ್ನಿಪರೀಕ್ಷೆಗೆ ಒಳಗಾಗದಂತೆ ನೋಡಿಕೊಳ್ಳಲು, ನಾನು ಈ ಪ್ರಯಾಣವನ್ನು ಮುಂದುವರಿಸುತ್ತೇನೆ. ನನ್ನೊಂದಿಗೆ ನಿಂತಿರುವವರಿಗೆ, ನಿಮ್ಮ ಪ್ರೀತಿಗೆ ಹೃತ್ಪೂರ್ವಕ ಧನ್ಯವಾದಗಳು ಎಂದು ಯಾರ ಹೆಸರನ್ನೂ ನಮೂದಿಸದೇ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ನಟಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಟ್ವಿಸ್ಟ್- ಪಲ್ಸರ್ ಸುನಿಯ ವಕೀಲರೇ ಈಗ ಸಾಕ್ಷಿಧಾರ
ಕನ್ನಡ, ಮಲಯಾಳಂ, ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಅಭಿನಯಿಸುವ ಮೂಲಕವಾಗಿ ಜನ ಮನ್ನಣೆ ಪಡೆದಿರುವ ನಟಿಯಾಗಿದ್ದಾರೆ. 2017ರಲ್ಲಿ ಚಿತ್ರೀಕರಣವನ್ನು ಮುಗಿಸಿ ತ್ರಿಶೂರ್ನಿಂದ ಕೊಚ್ಚಿಗೆ ಪ್ರಯಾಣಿಸುತ್ತಿದ್ದಾಗ ಭಾವನಾ ಅವರನ್ನು ಅಪಹರಿಸಿ ಎರಡು ಗಂಟೆಗಳ ಕಾಲ ಕಾರಿನಲ್ಲಿಯೇ ಕಿರುಕುಳ ನೀಡಲಾಗಿತ್ತು. ಈ ಪ್ರಕರಣದಲ್ಲಿ ಮಲಯಾಳಂ ನಟ ದಿಲೀಪ್ ವಿರುದ್ಧ ಅವರು ಗಂಭೀರ ಆರೋಪ ಮಾಡಿದ್ದರು. ಈ ಘಟನೆ ನಡೆದು ಐದು ವರ್ಷ ಕಳೆದಿದೆ. ಈಗ ಭಾವನಾ ಆ ಘಟನೆ ಬಗ್ಗೆ ಮಾತನಾಡಿದ್ದಾರೆ.
ಕಳೆದ ವರ್ಷ ಅವರ ನಟನೆಯ ನಾಲ್ಕು ಕನ್ನಡ ಚಿತ್ರಗಳು ತೆರೆಗೆ ಬಂದಿವೆ. ಸದ್ಯ, ಅವರು ಯಾವುದೇ ಹೊಸ ಚಿತ್ರಗಳನ್ನು ಒಪ್ಪಿಕೊಂಡಿಲ್ಲ. ಅವರ ನಟನೆಯ ಭಜರಂಗಿ 2 ಕಳೆದ ಅಕ್ಟೋಬರ್ 29ರಂದು ಚಿತ್ರಮಂದಿರದಲ್ಲಿ ರಿಲೀಸ್ ಆಗಿತ್ತು. ತಮ್ಮ ಉತ್ತಮವಾದ ನಟನಾ ಕೌಶಲ್ಯದ ಮೂಲಕವಾಗಿ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ.