ಬೆಂಗಳೂರು: ಲಿಂಗಾಯತ, ಒಕ್ಕಲಿಗ ಜಾತಿ ಲೆಕ್ಕಾಚಾರ ಹಾಗೂ ಡಿಕೆಶಿ ಜೆಡಿಎಸ್ ಬಾವುಟ ಹಿಡಿದ ವಿಷಯದ ಬಗ್ಗೆ ಸಿದ್ದರಾಮಯ್ಯ ತಮ್ಮ ಆಪ್ತರ ಜೊತೆ ಮಾತನಾಡುತ್ತಾ ಕುಳಿತ ವಿಡಿಯೋ ವೈರಲ್ ಆಗಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಹಿನ್ನೆಲೆಯಲ್ಲಿ ಪುತ್ರ ಯತೀಂದ್ರ ಅವರು ಅಸಮಾಧಾನವನ್ನು ಹೊರ ಹಾಕಿ ಸಲಹೆ ನೀಡಿದ್ದಾರೆ.
ಸಿದ್ದರಾಮಯ್ಯ ಆಪ್ತರೇ ರಾಜಕೀಯ ತಂತ್ರಗಾರಿಕೆಯ ಭಾಗವಾಗಿ ವಿಡಿಯೋವನ್ನ ಲೀಕ್ ಮಾಡಿಸಿದ್ದರು. ಆದರೆ ಆ ವಿಡಿಯೋ ಸಿದ್ದರಾಮಯ್ಯ ಪಾಲಿಗೆ ಮತ್ತಷ್ಟು ನೆಗೆಟಿವ್ ಆಗುತ್ತಿದೆ ಅನ್ನೋದು ಪುತ್ರ ಯತೀಂದ್ರರ ಆಕ್ಷೇಪವಾಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಸೋಮವಾರ ಈ ಸಂಬಂಧ ಸಿದ್ದರಾಮಯ್ಯ ಜೊತೆ ಯತೀಂದ್ರ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಲಿಂಗಾಯತರು ಹಾಗೂ ಒಕ್ಕಲಿಗರ ವಿರುದ್ಧ ಮಾತನಾಡಬೇಡಿ ಅಂತ ಹೇಳಿದ್ದೆ. ಆಗ ನಿನಗೆ ರಾಜಕೀಯ ಗೊತ್ತಾಗಲ್ಲ ಸುಮ್ನಿರು ಅಂತ ನನಗೆ ಬೈದಿದ್ದೀರಿ. ಆ ಬಳಿಕ ಏನಾಯಿತು, ಅದೇ ವಿಷಯದಿಂದಾಗಿ ಅದೇ ಸಮುದಾಯಗಳ ಸಿಟ್ಟು ನಿಮ್ಮ ಅಧಿಕಾರ ಕಳೆದುಕೊಳ್ಳುವಂತೆ ಮಾಡಿತ್ತು. ಈಗ ಮತ್ತೆ ಅದೇ ರೀತಿಯ ತಪ್ಪು ಮಾಡುತ್ತಿದ್ದೀರಿ. ನಾಲ್ಕು ಗೋಡೆಯ ಮಧ್ಯೆ ಆಪ್ತರ ಮುಂದೆ ಮಾತನಾಡಿದ್ದನ್ನ ವಿಡಿಯೋ ಮಾಡಿ ಬಹಿರಂಗಪಡಿಸೋ ಅವಶ್ಯಕತೆ ಏನಿತ್ತು ಎಂದು ಅಪ್ಪನ ಮೇಲೆ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ದೋಸ್ತಿ ಮುಗಿದ ಮೇಲೆ ಇವರಿಗ್ಯಾಕೆ ಅವ್ರ ಉಸಾಬರಿ: ಡಿಕೆಶಿ ವಿರುದ್ಧ ಸಿದ್ದರಾಮಯ್ಯ ಕಿಡಿ
ಅಪ್ಪನ ಜೊತೆಗಿರುವವರೇ ದಿಕ್ಕು ತಪ್ಪಿಸುತ್ತಿದ್ದಾರೆ. ಎಚ್ಚರಿಕೆಯಿಂದ ಹೆಜ್ಜೆ ಇಡಿ ಎಂದು ಪುತ್ರ ಯತೀಂದ್ರ ಅವರು ಸಿದ್ದರಾಮಯ್ಯಗೆ ತಿಳಿಸಿದ್ದಾರೆ. ಮಗನ ರಾಜಕೀಯ ಗುಣಾಕಾರ, ಭಾಗಕಾರ ಕಂಡ ಸಿದ್ದರಾಮಯ್ಯ ಅವರು, ಪುತ್ರನ ಮಾತಿಗೆ ಮರು ಮಾತನಾಡದೆ ಸೈಲೆಂಟಾಗಿದ್ದಾರೆ. ಈ ಮೂಲಕ ಆಪ್ತರೇ ಅಪ್ಪನನ್ನ ದಾರಿ ತಪ್ಪಿಸುತ್ತಿದ್ದಾರೆ ಎಂಬುದನ್ನ ಅರಿತ ಡಾ.ಯತೀಂದ್ರ, ಅಪ್ಪನಿಗೆ ಬುದ್ಧಿ ಹೇಳುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ವಿಡಿಯೋದ ತಪ್ಪು ವ್ಯಾಖ್ಯಾನ ನೀಡಿ ಬಿಜೆಪಿ ವಿಕೃತಾನಂದ: ಸಿದ್ದರಾಮಯ್ಯ
ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬುದ್ಧಿ ಹೇಳಿದ್ದ ಮಗನನ್ನ ಗದರಿದ್ದ ಸಿದ್ದರಾಮಯ್ಯ ರಾಜಕೀಯವಾಗಿ ಎಡವಿದ್ದರೂ ಈಗ ಬುದ್ಧಿ ಹೇಳಿದ ಮಗನಿಗೆ ಸಿದ್ದರಾಮಯ್ಯರ ಮೌನವೇ ಉತ್ತರವಾಗಿರುವುದು ಕುತೂಹಲ ಮೂಡಿಸಿದೆ.