– ಜನರ ಬೆಂಬಲ ಸಿಕ್ಕರೆ ನಿಯಂತ್ರಣ ಆಗುತ್ತೆ
– ಎಲ್ಲ ಜಿಲ್ಲೆಗಳಲ್ಲಿ ಲ್ಯಾಬ್ ತೆರೆಯುತ್ತೇವೆ
ಬೆಂಗಳೂರು: ವಿದೇಶದಿಂದ ಬಂದವರ ಬಲಗೈಗೆ ಸ್ಟಾಂಪ್ ಹಾಕುತ್ತೇವೆ ಹಾಗೂ 15 ದಿನ ಕಡ್ಡಾಯವಾಗಿ ಪ್ರತ್ಯೇಕಗೊಳಿಸಲು ತೀರ್ಮಾನ ಮಾಡಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಅವರು ಹೇಳಿದ್ದಾರೆ.
ವಿಧಾನಸಭೆಯಲ್ಲಿ ಮಾತನಡಿದ ಅವರು, ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಎಂದು ವಿಶ್ವಸಂಸ್ಥೆ ಘೋಷಣೆ ಮಾಡಿದೆ. ವೈದ್ಯಕೀಯ ಶಿಕ್ಷಣ, ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಸಿಎಂ ಸೂಚನೆ ಕೊಟ್ಟಿದ್ದರು. ಇವತ್ತು ಎರಡು ತಿಂಗಳನಿಂದ ವಿಮಾನ ನಿಲ್ದಾಣ, ಬಂದರುಗಳಲ್ಲಿ ತಪಾಸಣೆ ಮಾಡುತ್ತಿದ್ದೇವೆ. ಎ,ಬಿ,ಸಿ ಗ್ರೂಪ್ಗಳನ್ನು ಮಾಡಿ ಪ್ರತ್ಯೇಕಗೊಳಿಸಿ ತಪಾಸಣೆ ಮಾಡಿದ್ದೇವೆ ಎಂದರು.
ಕೊರೊನಾ ತಡೆಗಟ್ಟಲು 200 ಕೋಟಿ ಹಣವನ್ನು ರಾಜ್ಯ ಸರ್ಕಾರ ತೆಗೆದು ಇಟ್ಟಿದೆ. ದೇಶದಲ್ಲಿ ಮೊದಲ ಬಾರಿಗೆ ಕರ್ನಾಟಕ ಹಣವನ್ನ ಇಟ್ಟಿದೆ. ವಿದೇಶಗಳಿಂದ ಬರುವವರನ್ನು 15 ದಿನ ಕಡ್ಡಾಯವಾಗಿ ಪ್ರತ್ಯೇಕಗೊಳಿಸಲಾಗುವುದು. ಖಾಸಗಿ ರೆಸಾರ್ಟ್ಸ್, ಹೋಟೆಲ್ಸ್, ಆಸ್ಪತ್ರೆಗಳಲ್ಲಿ 15 ದಿನ ಗೃಹ ಬಂಧನದಲ್ಲಿ ಇಡುತ್ತೇವೆ. ಮದುವೆ ಸಮಾರಂಭಗಳಲ್ಲಿ 150 ಜನರಿಗೆ ಮಾತ್ರ ಅಡುಗೆ ಮಾಡಬೇಕು. ವಿಧಾನಸೌಧ, ವಿಕಾಸಸೌಧಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು. ಇದನ್ನು ಓದಿ: ಮಾರ್ಚ್ 31ರವರೆಗೆ ಬಂದ್ ವಿಸ್ತರಣೆ – 4 ಮಂದಿ ಸಚಿವರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್
ಅಮೆರಿಕ, ಇಟಲಿ, ಸ್ಪೇನ್ ದೇಶಗಳು ಎಚ್ಚರ ತಪ್ಪಿದ್ದವು. ಹಾಗಾಗಿ ಆ ದೇಶಗಳಲ್ಲಿ ಕೊರೊನಾ ಕೇಸ್ಗಳು ತುಂಬಾ ಇವೆ. ಆ ದೇಶಗಳಲ್ಲಿ ಫಸ್ಟ್ ಸ್ಟೇಜ್ ಬಂದ ಬಳಿಕ ರಜೆ ಘೋಷಣೆಯಾಗಿತ್ತು. ರಜೆ ಘೋಷಣೆಯಿಂದ ಸೋಂಕಿತ ಮಂದಿ ಮಾಲ್ಗಳಿಗೆಲ್ಲ ಓಡಾಡಿದರು. ನಂತರ ದಿಢೀರನೇ ಆ ದೇಶಗಳಲ್ಲಿ ಕೊರೊನಾ ಹಬ್ಬಿತ್ತು. ಆ ದೇಶಗಳು ಮಾಡಿದ ತಪ್ಪು ನಾವು ಮಾಡಿಲ್ಲ. ನಮ್ಮಲ್ಲಿ ಇನ್ನು ಎರಡು ಮೂರು ವಾರ ಕೊರೊನಾ ನಿಗ್ರಹಕ್ಕೆ ಮುಂದಾಗಬೇಕು. ಜನರ ಬೆಂಬಲ ಸಿಕ್ಕಿದರೆ ಕೊರೊನಾ ತಡೆಗಟ್ಟುವುದು ಯಶಸ್ವಿ ಆಗಲಿದೆ ಎಂದು ಸುಧಾಕರ್ ಹೇಳಿದರು.
ನಾಲ್ವರು ಸಚಿವರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದೆ. ಹೊರದೇಶದಿಂದ ಬರುವ ಜನರಿಗೆ ಬಲಗೈಗೆ ಸ್ಟಾಂಪ್ ಹಾಕುತ್ತೇವೆ. 15 ದಿನ ಅವರು ಯಾರನ್ನೂ ಸಂಪರ್ಕ ಮಾಡಬಾರದು ಎಂಬ ಆದೇಶ ಮಾಡಿದ್ದೇವೆ. ಇದುವರೆಗೆ 1,17,306 ಪ್ರಯಾಣಿಕರನ್ನು ರಾಜ್ಯದಲ್ಲಿ ತಪಾಸಣೆ ಮಾಡಿದ್ದೇವೆ. ಬೆಂಗಳೂರಲ್ಲಿ 82,276 ಪ್ರಯಾಣಿಕರು, ಮಂಗಳೂರಲ್ಲಿ 29,477 ಪ್ರಯಾಣಿಕರನ್ನು ತಪಾಸಣೆ ಮಾಡಿದ್ದೇವೆ. ಪ್ರಪಂಚದಲ್ಲಿ ಒಟ್ಟು 88,881 ಪಾಸಿಟಿವ್ ಕೊರೊನಾ ಪ್ರಕರಣಗಳು ಇದ್ದವು. ಇದರಲ್ಲಿ 68,798 ಕೊರೊನಾ ಪೀಡಿತರು ಗುಣಮುಖರಾಗಿದ್ದಾರೆ. ಹಾಗಾಗಿ ಕೊರೊನಾ ಸೋಂಕು ಬಂದ ತಕ್ಷಣ ಸತ್ತು ಹೋಗುತ್ತಾರೆ ಎಂದು ಭಯ ಬೀಳುವುದು ಬೇಡ ಎಂದು ಸ್ಪಷ್ಟಪಡಿಸಿದರು.
ದೇಶದಲ್ಲಿ 54 ಲ್ಯಾಬ್ ಇವೆ. ಕರ್ನಾಟಕದಲ್ಲಿ 5 ಲ್ಯಾಬ್, ಬೇರೆ ರಾಜ್ಯಗಳಿಗೆ ಹೋಲಿಸಿದಾಗ ಕರ್ನಾಟಕದಲ್ಲಿಯೇ ಹೆಚ್ಚು ಲ್ಯಾಬ್ ಇವೆ. ಪ್ರಾದೇಶಿಕ ವಿಭಾಗವಾರು ಲ್ಯಾಬ್ಗಳನ್ನು ಹೆಚ್ಚಳ ಮಾಡುತ್ತೇವೆ. ಲ್ಯಾಬ್ಗಳನ್ನು ಜಿಲ್ಲೆಗಳಿಗೂ ವಿಸ್ತರಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ. ಇವತ್ತು ತುರ್ತು ಸಂಪುಟ ಸಭೆ ಕರೆದು ಸಿಎಂ ಚರ್ಚೆ ಮಾಡಿ ನಿರ್ಣಯಗಳನ್ನು ತೆಗೆದುಕೊಂಡಿದ್ದಾರೆ ಎಂದರು.
ವೈದ್ಯರು, ವೈದ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರಿಗೆ ಮತ್ತು ಎನ್ಜಿಒಗಳಿಗೆ ಇನ್ಸೆಂಟಿವ್ ಕೊಡಲು ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಿದ್ದೇವೆ ಎಂದು ತಿಳಿಸಿದರು.